ADVERTISEMENT

ಕುಡಿಯುವ ನೀರಿನ ಸಮಸ್ಯೆಯಾಗದಿರಲಿ: ಸಚಿವ ಪ್ರಭು ಚವಾಣ್‌

ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ: ಸಚಿವ ಪ್ರಭು ಚವಾಣ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2022, 4:27 IST
Last Updated 27 ಏಪ್ರಿಲ್ 2022, 4:27 IST
ಕಮಲನಗರ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಚಿವ ಪ್ರಭು ಚವಾಣ್‌ ಜನರ ಸಮಸ್ಯೆ ಆಲಿಸಿದರು
ಕಮಲನಗರ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಚಿವ ಪ್ರಭು ಚವಾಣ್‌ ಜನರ ಸಮಸ್ಯೆ ಆಲಿಸಿದರು   

ಕಮಲನಗರ: ‘ಬೇಸಿಗೆಯಲ್ಲಿ ಸಹಜವಾಗಿಯೇ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಅಧಿಕಾರಿಗಳು ಅದನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು’ ಎಂದು ಪಶುಸಂಗೋಪನಾ ಸಚಿವ ಪ್ರಭು ಚವಾಣ್‌ ತಿಳಿಸಿದರು.

ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಔರಾದ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ₹182 ಕೋಟಿ ವೆಚ್ಚದಲ್ಲಿ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ನಡೆಯುತ್ತಿದೆ. ತಾಲ್ಲೂಕಿನ ಬಹುತೇಕ ಹಳ್ಳಿಗಳನ್ನು ಪ್ರಥಮ ಹಂತದ ಯೋಜನೆಗೆ ಆಯ್ಕೆ ಮಾಡಲಾಗಿದೆ. ಇನ್ನೂ ಆಯ್ಕೆಯಾಗದ ಗ್ರಾಮಗಳಲ್ಲಿ ಎರಡನೇ ಹಂತದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತದೆ ಎಂದು ಹೇಳಿದರು.

ADVERTISEMENT

ಕೆಲವು ಗ್ರಾಮಗಳಲ್ಲಿ ತೀವ್ರ ನೀರಿನ ಸಮಸ್ಯೆ ಇರುವ ಬಗ್ಗೆ ಸಾರ್ವಜನಿಕರು ಸಚಿವರ ಗಮನಕ್ಕೆ ತಂದಾಗ, ತೀವ್ರ ಸಮಸ್ಯೆ ಇರುವ ಗ್ರಾಮಗಳಿಗೆ ಖಾಸಗಿ ಮೂಲಗಳಿಂದ ನೀರು ಪಡೆದು ಸರಬರಾಜು ಮಾಡಬೇಕು. ಇಲ್ಲವೇ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು ಎಂದರು.

ಸಣ್ಣ–ಪುಟ್ಟ ಕಾರಣಗಳಿಗಾಗಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಬಾರದು ಎಂದು ಹೇಳಿದರು.ಗ್ರಾಮಸಭೆ, ಶೌಚಾಲಯ, ನೀರಿನ ಸಮಸ್ಯೆ ಕುರಿತು ದೂರುಗಳು ಬಂದ ಕಾರಣ ಸಚಿವರು ತಕ್ಷಣವೇ ಸಮಸ್ಯೆ ಬಗೆಹರಿಸ ಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವು ಜುಲ್ಫೆ, ತಹಶೀಲ್ದಾರ್‌ ರಮೇಶ ಪೆದ್ದೆ, ಡಿವೈಎಸ್ಪಿ ಜೇಮ್ಸ್‌ ಮೇನೆಜಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೈಯದ್ ಫಜಲ್ ಅಲಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ ಒಡೆಯರ್, ತಾ.ಪಂ. ಸಹಾಯಕ ನಿರ್ದೇಶಕ ಹಣಮಂತರಾವ ಕೌಟಗೆ, ಎಇಇ ವೀರಶೇಟ್ಟಿ ರಾಠೋಡ, ಪಿಆರ್‌ಇ ಜಗನ್ನಾಥ ಮಜಗೆ, ಬಂಡೆಪ್ಪ ಕಂಟೆ, ರಾಮಶೇಟ್ಟಿ, ಬಂಟಿ ರಾಂಪುರೆ, ಸಿಪಿಐ ಘಾಳೆಪ್ಪ, ಪಿಎಸ್‍ಐ ನಂದಿನಿ.ಎಸ್, ಕಮಲನಗರ ಪಿಎಸ್‍ಐ ಬಸವರಾಜ, ಪಿಎಸ್‍ಐ ಚಂದ್ರಶೇಖರ, ಎಎಸ್‍ಐ ಸುಭಾಷ ಎನಗುಂದೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.