ADVERTISEMENT

ಬೀದರ್: ಸ್ವಚ್ಛತಾ ಅಭಿಯಾನಕ್ಕೆ ನೌಕರರ ಸಂಘ ಸಾಥ್

ರಿಂಗ್ ರಸ್ತೆ ವಿಭಜಕದ ಮಧ್ಯ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 12:42 IST
Last Updated 28 ಸೆಪ್ಟೆಂಬರ್ 2020, 12:42 IST
ಬೀದರ್‌ನ ದೇವ ದೇವ ವನದಿಂದ ಚಿಕ್ಕಪೇಟೆಗೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆ ವಿಭಜಕದ ಮಧ್ಯ ಬೆಳೆದಿದ್ದ ಮುಳ್ಳು, ಕಂಟಿ ತೆರವುಗೊಳಿಸಿದ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು
ಬೀದರ್‌ನ ದೇವ ದೇವ ವನದಿಂದ ಚಿಕ್ಕಪೇಟೆಗೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆ ವಿಭಜಕದ ಮಧ್ಯ ಬೆಳೆದಿದ್ದ ಮುಳ್ಳು, ಕಂಟಿ ತೆರವುಗೊಳಿಸಿದ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು   

ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿ ಜಿಲ್ಲಾ ಆಡಳಿತ ನಡೆಸುತ್ತಿರುವ ಸ್ವಚ್ಛತಾ ಅಭಿಯಾನಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಸಾಥ್ ನೀಡಿದೆ.

ದೇವ ದೇವ ವನದಿಂದ ಚಿಕ್ಕಪೇಟೆಗೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆ ವಿಭಜಕದ ಮಧ್ಯದ ಮುಳ್ಳು, ಕಂಟಿ, ಕಳೆ ತೆರವಿಗೆ ನಡೆದ ಶ್ರಮದಾನದಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅವರ ಮುಂದಾಳತ್ವದಲ್ಲಿ ನೌಕರರು ಉತ್ಸಾಹದಿಂದ ಪಾಲ್ಗೊಂಡರು.

ತಂಡಗಳಲ್ಲಿ ವಿಭಜಕದ ನಡುವೆ ಬೆಳೆದ ಕಳೆ, ಅಲ್ಲಲ್ಲಿ ಬೀಸಾಡಿದ್ದ ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಿದರು.

ADVERTISEMENT

‘ಜಿಲ್ಲಾ ಆಡಳಿತವು ನಗರದ ಹೊರವಲಯದ 19 ಕಿ.ಮೀ. ಉದ್ದದ ರಿಂಗ್ ರಸ್ತೆ ಮಧ್ಯದ ವಿಭಜಕಗಳನ್ನು ಸ್ವಚ್ಛಗೊಳಿಸಿ, ಅಲಂಕಾರಿಕ ಸಸಿಗಳನ್ನು ನೆಟ್ಟು ಸುಂದರೀಕರಣಗೊಳಿಸುವ ಯೋಜನೆ ಕೈಗೆತ್ತಿಕೊಂಡಿರುವುದು ಸ್ವಾಗತಾರ್ಹವಾಗಿದೆ’ ಎಂದು ರಾಜೇಂದ್ರ ಕುಮಾರ ಗಂದಗೆ ಪ್ರತಿಕ್ರಿಯಿಸಿದರು.

ಬೀದರ್ ನಗರವನ್ನು ಸ್ವಚ್ಛ, ಹಸಿರು ಹಾಗೂ ಸುಂದರ ನಗರವನ್ನಾಗಿಸಲು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ನಡೆಸುತ್ತಿರುವ ಅಭಿಯಾನಕ್ಕೆ ಸಂಘ– ಸಂಸ್ಥೆಗಳು ಕೈಜೋಡಿಸಬೇಕು ಎಂದು ಹೇಳಿದರು.

‘ರಸ್ತೆ ಬದಿ ಇರುವ ಹೊಲಗಳ ಮಾಲೀಕರು ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡಬೇಕು. ಸಾರ್ವಜನಿಕರು ಮನೆ ಅಂಗಳ, ರಸ್ತೆ ಬದಿ, ಖಾಲಿ ಸ್ಥಳ ಹಾಗೂ ಉದ್ಯಾನಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು. ನೈರ್ಮಲ್ಯ ಕಾಪಾಡಬೇಕು. ಬೀದರ್ ನಗರ ಹಸಿರು ಹಾಗೂ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಲು ತಮ್ಮದೇ ಆದ ಕೊಡುಗೆ ನೀಡಬೇಕು’ ಎಂದರು.

‘ಸರ್ಕಾರಿ ನೌಕರರ ಸಂಘವು ನೌಕರರ ಸಮಸ್ಯೆಗೆ ಸ್ಪಂದಿಸುವ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನೂ ನಿಭಾ ಯಿಸುತ್ತ ಬಂದಿದೆ’ ಎಂದು ಹೇಳಿದರು.

ಸಂಘದ ಪದಾಧಿಕಾರಿಗಳಾದ ರಾಜಶೇಖರ ಮಂಗಲಗಿ, ಅಶೋಕ ರೆಡ್ಡಿ, ಬಸವರಾಜ ಜಕ್ಕಾ, ರಾಜಕುಮಾರ ಹೊಸದೊಡ್ಡೆ, ಶಿವಕುಮಾರ ಬಾವಗೆ, ಯೋಗೇಂದ್ರ ಯದಲಾಪುರೆ, ಬಕ್ಕಪ್ಪ, ಮನೋಹರ ಕಾಶಿ, ಸಂಜು ಸೂರ್ಯವಂಶಿ, ಗಣಪತಿ, ನೀಲಕಂಠ ಬಿರಾದಾರ, ವೆಂಕಟ ಶಿಂಧೆ, ಅನ್ವರ್ ಬೇಗ್, ಸುನೀಲ, ಉಮೇಶ ಪಾಟೀಲ, ಶಾಂತಕುಮಾರ ಬಿರಾದಾರ, ಬಳವಂತರಾವ್ ರಾಠೋಡ್, ಸೂರ್ಯಕಾಂತ ಸಾಳೆ, ಶಾಮರಾವ್, ರಾಜಶೇಖರ ಮಠ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.