ಔರಾದ್: ಪಟ್ಟಣದ ಅಮರೇಶ್ವರ ದೇವಸ್ಥಾನ ಅಭಿವೃದ್ಧಿಯಿಂದ ವಂಚಿತವಾಗಿದೆ. ಈ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದೆ. ಉಪವಿಭಾಗಾಧಿಕಾರಿ ಆಡಳಿತ ಅಧಿಕಾರಿ ಹಾಗೂ ತಾಲ್ಲೂಕು ದಂಡಾಧಿಕಾರಿ ಕಾರ್ಯದರ್ಶಿಯಾಗಿರುತ್ತಾರೆ.
ಈಚೆಗೆ ಸುರಿದ ಮಳೆಗೆ ದೇವಸ್ಥಾನದ ಕೆಲ ಭಾಗ ಹಾಳಾಗಿದೆ. ಗರ್ಭಗುಡಿ ಎದುರಿನ ಮಂಟಪದಲ್ಲಿ ಮಳೆ ನೀರು ಬರುತ್ತಿದೆ. ಇದರಿಂದ ಭಕ್ತರಿಗೆ ದರ್ಶನ ಪಡೆಯಲು ತೊಂದರೆಯಾಗುತ್ತಿದೆ. ಮಹಾದ್ವಾರದ ಮೇಲೆ ಗಿಡ -ಗಂಟಿ ಬೆಳೆದು ಶಿಥಿಲಾವಸ್ಥೆಗೆ ತಲುಪಿದರೂ ಸಂಬಂಧಿಸಿದವರು ಗಮನಹರಿಸಿಲ್ಲ ಎಂದು ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ.
‘ಹೊಸದಾಗಿ ಮಹಾದ್ವಾರ ನಿರ್ಮಾಣ ಹಾಗೂ ಕೆಲ ಮಹತ್ವದ ಕಾಮಗಾರಿ ಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಸಾಕಷ್ಟು ಸಲ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಭಕ್ತರು ನೀಡಿದ ಹಣವೂ ಇದೆ. ಆದರೂ ಕೆಲಸ ಮಾಡಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ’ ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ದೂರಿದ್ದಾರೆ.
‘ಈ ಹಿಂದಿನ ಉಪವಿಭಾಗಾದಿಕಾರಿ ಮಹಾದ್ವಾರ ನಿರ್ಮಾಣಕ್ಕೆ ಟೆಂಡರ್ ಕರೆದು ಕಾಮಗಾರಿ ಆರಂಭಿಸುವುದಾಗಿ ಹೇಳಿದ್ದರು. ಆದರೆ ಲಾಕ್ಡೌನ್ನಿಂದ ಆ ಕೆಲಸ ನಿಂತಿದೆ. ಈಗ ಹೊಸ ಉಪವಿಭಾಗಾಧಿಕಾರಿ ಬಂದಿದ್ದಾರೆ. ಅವರನ್ನು ಭೇಟಿ ಮಾಡಿ ದೇವಸ್ಥಾನದ ಅಗತ್ಯ ಕಾಮಗಾರಿ ಕೈಗೊಳ್ಳಲು ಮನವಿ ಮಾಡಿಕೊಳ್ಳುವುದಾಗಿ’ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.