ಬಸವಕಲ್ಯಾಣ: ‘ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ನೀಡಿದರೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅವು ಮುಂದುವರೆದು ಸಮಾನತೆ ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಮುತ್ತಣ್ಣ ಬೆನ್ನೂರ ಹೇಳಿದ್ದಾರೆ.
ಶರಣ ಮಾದಾರ ಚನ್ನಯ್ಯ ಅರಿವು ಪೀಠದಿಂದ ಶನಿವಾರ ಇಲ್ಲಿ ಆಯೋಜಿಸಿದ್ದ 22ನೇ ಶರಣ ಮಾದಾರ ಚನ್ನಯ್ಯ ಉತ್ಸವದಲ್ಲಿ ಅವರು ಮಾತನಾಡಿದರು.
‘ಬಸವಣ್ಣನವರು ಮೇಲು ಕೀಳು ಎಣಿಸದೆ ಎಲ್ಲರಿಗೂ ಸಮಾನವಾಗಿ ಕಂಡರು. ಬುದ್ಧ ಹಾಗೂ ಬಸವಣ್ಣನವರ ಆಶಯ ಈಡೇರಲು ಅವರ ತತ್ವದ ಪಾಲನೆ ಅಗತ್ಯವಾಗಿದೆ. ಮಾದಿಗ ಸಮಾಜ ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿದ್ದು ಪ್ರತ್ಯೇಕ ಮೀಸಲಾತಿಯ ಅಗತ್ಯವಿದೆ. ಸಮಾಜದವರು ಒಗ್ಗಟ್ಟು ಪ್ರದರ್ಶಿಸಬೇಕು. ಮಠಾಧೀಶರೂ ನಮ್ಮ ಬೆನ್ನೆಲುಬಾಗಿ ಇರಬೇಕು’ ಎಂದು ಹೇಳಿದರು.
ಬಸವ ಮಹಾಮನೆಯ ಬಸವಪ್ರಭು ಸ್ವಾಮೀಜಿ ಮಾತನಾಡಿ, ‘ಕಾಯಕ, ದಾಸೋಹ ತತ್ವ ನೀಡಿದ ಬಸವಣ್ಣನವರ ಕಾರ್ಯಕ್ಷೇತ್ರ ಇದಾಗಿದ್ದು ಇಲ್ಲಿ ಎಲ್ಲರೂ ಭಾತೃತ್ವ ಭಾವನೆಯಿಂದ ಬಾಳಬೇಕು. ಶರಣತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
ಅನುಭವ ಮಂಟಪ ಸಂಚಾಲಕ ಶಿವಾನಂದ ದೇವರು, ಚಿತ್ರಮ್ಮತಾಯಿ, ಮಾದಾರ ಚನ್ನಯ್ಯ ಅರಿವು ಪೀಠಾಧ್ಯಕ್ಷ ಕಾಂತ ಸ್ವಾಮೀಜಿ, ಸಿಡಿಪಿಒ ಶಾರದಾ ನಿರುಪಾದಿ, ರಮೇಶ ಉಮಾಪುರೆ, ರವಿ ನಾವದಗೀಕರ್, ಚೇತನಾ ಭಾಗವತ, ಸಾದ್ವಿ ಮಾತನಾಡಿದರು.
ಮಾದಿಗ ಸಮಾಜ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಯುವರಾಜ ಭೆಂಡೆ, ಮಾದಿಗ ದಂಡೋರ ಹೋರಾಟ ಸಮಿತಿ ಅಧ್ಯಕ್ಷ ಸಂಜೀವ ಸಂಗನೂರೆ, ನಗರಸಭೆ ಸದಸ್ಯ ಮಾರುತಿ ಲಾಡೆ, ಘಾಳೆಪ್ಪ ಮುಜನಾಯಕ, ದತ್ತು ಗೋರಾ, ಹರಿಹರ ಗೋಖಲೆ, ಮಚೇಂದ್ರ ಗೋರಟಾ, ರಾಜೇಂದ್ರ ಗೋಖಲೆ, ಅರವಿಂದ ಧವಲೇಕರ್, ಸಂತೋಷ ಮುಜನಾಯಕ, ಅಶೋಕ ಸಂಗನೂರೆ, ಸಂದೀಪ ಉಮಾಪುರೆ, ಸಂಜೀವ ಬಗದೂರಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.