
ಕಮಲನಗರ: ‘ಪಟ್ಟಣದ ರೈಲು ನಿಲ್ದಾಣದ ಮೂಲಕ ಸಂಚರಿಸುವ ಎಲ್ಲ ತಡೆರಹಿತ ರೈಲುಗಳನ್ನು ಇಲ್ಲಿನ ನಿಲ್ದಾಣದಲ್ಲಿ ನಿಲುಗಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿ ಬುಧವಾರ ವಿವಿಧ ಸಂಘಟನೆ ಕಾರ್ಯಕರ್ತರು ದಕ್ಷಿಣ ಮಧ್ಯ ರೈಲ್ವೆ ವಿಭಾಗದ ವಿಭಾಗೀಯ ವ್ಯವಸ್ಥಾಪಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಬಾಲಾಜಿ ತೆಲಂಗ ನೇತೃತ್ವದಲ್ಲಿ ಕಾರ್ಯಕರ್ತರು ರೈಲ್ವೆ ನಿಲ್ದಾಣದಲ್ಲಿ ವಿಭಾಗೀಯ ವ್ಯವಸ್ಥಾಪಕ ಡಾ.ಗೋಪಾಲಕೃಷ್ಣನ್ ಅವರಿಗೆ ಮನವಿ ಸಲ್ಲಿಸಿದರು.
‘ಕಮಲನಗರ ರೈಲು ನಿಲ್ದಾಣದ ವ್ಯಾಪ್ತಿಗೆ ಗಡಿ ಭಾಗದಲ್ಲಿ 178ಕ್ಕೂ ಹೆಚ್ಚು ಗ್ರಾಮಗಳು ಒಳಗೊಂಡಿದ್ದು ನಿತ್ಯ ಬೀದರ್, ಹೈದರಾಬಾದ್, ಬೆಂಗಳೂರು, ಔರಂಗಾಬಾದ್, ನಾಂದೇಡ್ ಮತ್ತು ಮುಂಬೈ ಪಟ್ಟಣಗಳಿಗೆ ಹೆಚ್ಚು ಜನ ಪ್ರಯಾಣಿಸುತ್ತಾರೆ. ಆದರೆ ರೈಲ್ವೆ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ರೈಲು ನಿಲುಗಡೆ ಮಾಡದೆ ಇರುವುದರಿಂದ ಜನರು ಪರದಾಡುತ್ತಿದ್ದಾರೆ. ತಕ್ಷಣ ಎಕ್ಸ್ಪ್ರೆಸ್ ರೈಲುಗಳನ್ನು ನಿಲುಗಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
ದಕ್ಷಿಣ ಮಧ್ಯ ರೆಲ್ವೆ ವಿಭಾಗದ ವಿಭಾಗೀಯ ವ್ಯವಸ್ಥಾಪಕ ಡಾ. ಗೋಪಾಲಕ್ರಷ್ಣನ್ ಅವರು, ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಎಸ್ ಎನ್ ಶಿವಣಕರ್, ಯಶವಂತ ಬಿರಾದಾರ, ಉಮಾಕಾಂತ ಬಚ್ಚಣ್ಣಾ, ಮಹೇಶ ಸಜ್ಜನಶೆಟ್ಟಿ, ಕರವೇ ತಾಲ್ಲೂಕು ಅಧ್ಯಕ್ಷ ಮಂಜುನಾಥ ಸ್ವಾಮಿ, ಸಿದ್ರಾಮ ಪಾಟೀಲ, ಅಶೋಕ ಸಂಗಮೆ, ಮಹಾದೇವ ಠಾಕೂರ, ಪ್ರಕಾಶ ನಳಗೇರೆ, ರಾಜಕುಮಾರ ಬಿರಾದಾರ, ಶಾಂತವೀರ ಬಿರಾದಾರ, ಬಸವರಾಜ ಪಾಟೀಲ, ಶ್ರೀರಂಗ ಪರಿಹಾರ, ಚಂದ್ರಕಾಂತ ಸಂಗಮೆ, ಶಿವೂ ವಡ್ಡೆ, ಸಂತೋಷ ಸೋಲಾಪೂರೆ, ರವಿ ಕಾರಬಾರಿ, ಶಿವಶರಣಪ್ಪ ಚಿಕಮುರ್ಗೆ, ಅಮರ ಶಿವಣಕರ್, ಅಜೀತ ರಾಗಾ, ಧನರಾಜ ಭವರಾ, ಹಾವಗಿರಾವ ಟೊಣ್ಣೆ, ವಿಜಯಕುಮಾರ ಕೊಡಗೆ, ಸೈಯದ್ ಖುರೇಷಿ, ಶೇಕ್ ಉಸ್ಮಾನ ಹಾಗೂ ಇನ್ನಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.