ಜನವಾಡ: ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದಲ್ಲಿ ಗುರು ಭದ್ರೇಶ್ವರ ಜಾತ್ರೆ ಪ್ರಯುಕ್ತ ರಥೋತ್ಸವ ಶ್ರದ್ಧಾ, ಭಕ್ತಿಯಿಂದ ನಡೆಯಿತು.
ಬಣ್ಣ ಬಣ್ಣದ ಧ್ವಜಗಳಿಂದ ಅಲಂಕರಿಸಲಾಗಿದ್ದ ರಥಕ್ಕೆ ಪಂಡಿತಾರಾಧ್ಯ ಶಿವಾಚಾರ್ಯ, ಮಠದ ಶಿವಕುಮಾರ ಸ್ವಾಮಿ, ಶಾಂತಕುಮಾರ ಸ್ವಾಮಿ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು.
ಭಕ್ತರು ಹರ ಹರ ಮಹಾದೇವ, ಭದ್ರೇಶ್ವರ ಮಹಾರಾಜ್ ಕೀ ಜೈ ಎಂಬ ಘೋಷಣೆಗಳನ್ನು ಹಾಕುತ್ತ ತೇರು ಎಳೆದರು.
ಜಾಂಜ್ ಮೇಳ, ಡೊಳ್ಳು ಕುಣಿತ, ಹೆಜ್ಜೆ ಮೇಳ, ವಾದ್ಯ ಮೇಳ ಮೊದಲಾದ ಜಾನಪದ ಕಲಾ ತಂಡಗಳು ರಥೋತ್ಸವದ ಮೆರುಗು ಹೆಚ್ಚಿಸಿದವು.
ಬೀದರ್ ಸೇರಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳ ಅಪಾರ ಭಕ್ತರು ರಥಕ್ಕೆ ಬಾಳೆ, ಬೆಂಡು, ಬತಾಸು ಎಸೆದು ಭಕ್ತಿ ಸಮರ್ಪಿಸಿದರು.
ಮಾಜಿ ಶಾಸಕ ಅಶೋಕ ಖೇಣಿ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಭದ್ರೇಶ್ವರ ದರ್ಶನ ಪಡೆದರು.
ಪ್ರಮುಖರಾದ ಭದ್ರಯ್ಯ ಸ್ವಾಮಿ, ಲೋಕೇಶ ಕನಶೆಟ್ಟಿ, ಚನ್ನಮಲ್ಲಪ್ಪ ಹಜ್ಜರಗಿ, ರೇವಣಪ್ಪ ಭದ್ರಣ್ಣ, ರಾಜಕುಮಾರ ಪಾಟೀಲ, ಸಂಗಮೇಶ ಹಜ್ಜರಗಿ, ಶಾಂತವೀರ ಹಜ್ಜರಗಿ, ಸಂತೋಷ ಜಗದಾಳೆ ಹಾಗೂ ಸಿದ್ಧಾರೂಢ ಭಾಲ್ಕೆ, ಗುಂಡಯ್ಯ ಸ್ವಾಮಿ, ಮಡೆಪ್ಪ ಹಜ್ಜರಗಿ ಹಾಗೂ ಬಸವರಾಜ ಖಾದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.