ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮಂಗಳವಾರ ನಡೆದ ದಸರಾ ಧರ್ಮ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ ವಿಶ್ವಜೀತ್ ಢವಳೆ ಈ ವಿದ್ಯಾರ್ಥಿಗೆ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು `ರಂಭಾಪುರಿ ಯುವಸಿರಿ ಪ್ರಶಸ್ತಿ' ಪ್ರದಾನ ಮಾಡಿದರು
ಬಸವಕಲ್ಯಾಣ (ಬೀದರ್ ಜಿಲ್ಲೆ): `ಎಲ್ಲ ಸೌಖ್ಯ ಸಾಧನಗಳಿರುವ ಇಂದಿನ ದಿನಗಳಲ್ಲಿ ಕೌಟುಂಬಿಕ ಸಾಮರಸ್ಯ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ' ಎಂದು ಸಂಸದ ಸಾಗರ್ ಖಂಡ್ರೆ ಅಭಿಪ್ರಾಯಪಟ್ಟರು.
ನಗರದ ಅಕ್ಕ ಮಹಾದೇವಿ ಕಾಲೇಜು ಆವರಣದಲ್ಲಿ ಮಂಗಳವಾರ ನಡೆದ ದಸರಾ ಧರ್ಮ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಅಣ್ಣ ತಮ್ಮಂದಿರಲ್ಲಿ ಪ್ರೀತಿ, ವಿಶ್ವಾಸ ಕಾಣದಂತಾಗಿದೆ. ಇದರಿಂದ ಸಂಸಾರಗಳು ಸುಖಮಯ ಆಗುತ್ತಿಲ್ಲ. ಆದ್ದರಿಂದ ರಾಮ ಲಕ್ಷ್ಮಣರಂತೆ ಎಲ್ಲರೂ ಆತ್ಮೀಯತೆಯಿಂದ ಇರಬೇಕು. ದುಷ್ಟ ಶಕ್ತಿಗಳನ್ನು ದೂರವಿರಿಸಬೇಕು. ದಸರಾದಲ್ಲಿ ರಾವಣ ದಹನ ಅದರ ಪ್ರತೀಕವಾಗಿಯೇ ನಡೆಯುತ್ತದೆ' ಎಂದರು.
ಶಾಸಕ ಶರಣು ಸಲಗರ ಮಾತನಾಡಿ, `ಕಷ್ಟದ ಜೀವನದಲ್ಲಿಯೂ ಉನ್ನತ ಸ್ಥಾನ ಪಡೆಯಬೇಕು ಎಂಬ ಹಂಬಲವಿರಬೇಕು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದಿರುವ ವಿಶ್ವಜೀತ್ ತಾತೆರಾವ್ ಢವಳೆ ಅವರ ತಂದೆ ತಾಯಿ ನಿಧನ ಹೊಂದಿದ್ದರಿಂದ 18 ನೇ ವಯಸ್ಸಿನಲ್ಲೇ ಸಂಕಟದ ಪರ್ವತ ಎದುರಾಯಿತು. ಆದರೂ, ಛಲಬಿಡದೆ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾನೆ. ಇವನಂತೆ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು' ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, `ಗುರು, ಹಿರಿಯರ ಮಾತುಗಳನ್ನು ಆಲಿಸಿದರೆ ನೆಮ್ಮದಿ ಸಿಗುತ್ತದೆ. ರಂಭಾಪುರಿ ಶ್ರೀಯವರು ಇಲ್ಲಿ ದಸರಾ ದರ್ಬಾರ್ ನಡೆಸಿ ಅನೇಕ ಧಾರ್ಮಿಕ ಮುಖಂಡರ ಪಾದಸ್ಪರ್ಶ ಆಗುವಂತೆ ಮಾಡಿದ್ದಾರೆ. ಆದ್ದರಿಂದ ಈ ನೆಲದ ಉದ್ಧಾರ ಆಗುವುದರಲ್ಲಿ ಸಂಶಯವಿಲ್ಲ' ಎಂದರು.
ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಚಿಮಣಗೇರಿ ವೀರಮಹಾಂತೇಶ್ವರ ಸ್ವಾಮೀಜಿ, ಬೆಳಗುಂಪಾ ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಮುಖಂಡ ಧನರಾಜ ತಾಳಂಪಳ್ಳಿ, ಡಾ.ಬಸವರಾಜ ಸ್ವಾಮಿ, ರಮೇಶ ರಾಜೋಳೆ, ಕಾಂತಾ ಆನಂದ ಮಾತನಾಡಿದರು.
ಹಾರಕೂಡ ಚನ್ನವೀರ ಶಿವಾಚಾರ್ಯರು, ತಡೋಳಾ ರಾಜೇಶ್ವರ ಶಿವಾಚಾರ್ಯರು. ಸರಡಗಿ ರೇವಣಸಿದ್ದ ಶಿವಾಚಾರ್ಯರು, ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್ ಖದೀರ್, ಮುಖಂಡರಾದ ಅರ್ಜುನ ಕನಕ, ಮನೋಹರ ಮೈಸೆ, ನೀಲಕಂಠ ರಾಠೋಡ, ಸುನಿಲ ಪಾಟೀಲ, ಸುರೇಶ ಸ್ವಾಮಿ, ದಯಾನಂದ ಶೀಲವಂತ, ಸೂರ್ಯಕಾಂತ ಶೀಲವಂತ, ವೀರಣ್ಣ ಶೀಲವಂತ, ಸೋಮಶೇಖರ ವಸ್ತ್ರದ್, ರುದ್ರೇಶ್ವರ ಗೋರಟಾ, ಸೂರ್ಯಕಾಂತ ಮಠ, ಎಂ.ಕೆ.ನಂದಿ, ಎ.ಜಿ.ಪಾಟೀಲ, ಬಸವಂತಪ್ಪ ಲವಾರೆ, ಕಲ್ಪನಾ ಶೀಲವಂತ ಉಪಸ್ಥಿತರಿದ್ದರು. ವಿದ್ಯಾರ್ಥಿ ವಿಶ್ವಜೀತ್ ತಾತೇರಾವ್ ಢವಳೆಗೆ `ರಂಭಾಪುರಿ ಯುವಸಿರಿ ಪ್ರಶಸ್ತಿ' ನೀಡಲಾಯಿತು.
ಅಧಿಕಾರ ಬಂದಾಗ ದುರಹಂಕಾರ ಸಲ್ಲದು
ಸಾನ್ನಿಧ್ಯ ವಹಿಸಿದ್ದ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು ಮಾತನಾಡಿ, `ಅಧಿಕಾರ ಬಂದಾಗ ದುರಹಂಕಾರ ತೋರಿದವರ ಬದುಕು ನಂತರದಲ್ಲಿ ಕಷ್ಟಕ್ಕೆ ಸಿಲುಕುತ್ತದೆ. ಎಷ್ಟೋ ಅಧಿಕಾರಿಗಳು, ರಾಜಕಾರಣಿಗಳಿಗೆ ನಿವೃತ್ತರಾದಾಗ ಯಾರೂ ಕೇಳುವುದಿಲ್ಲ. ಆದ್ದರಿಂದ ದೊರೆತ ಅವಕಾಶದ ಸದುಪಯೋಗ ಮಾಡಿಕೊಳ್ಳಬೇಕು. ಲೋಕಕಲ್ಯಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು' ಎಂದರು.
`ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಸಂಸ್ಕೃತಿ ಕಲಿಸಬೇಕು. ಯುವ ಶಕ್ತಿ ದೇಶದ ಬಲು ದೊಡ್ಡ ಶಕ್ತಿಯಾಗಿದೆ. ಅದನ್ನು ಕಾಪಾಡಬೇಕು. ಇಂಥ ಕಾರ್ಯಕ್ರಮಗಳಲ್ಲಿ ಹೆಚ್ಚಿನವರು ಪಾಲ್ಗೊಂಡು ಉತ್ತಮ ಪ್ರತಿಕ್ರಿಯೆ ತೋರುವುದು ಅಗತ್ಯವಾಗಿದೆ' ಎಂದರು. ಸಮಾರಂಭದ ಕೊನೆಯಲ್ಲಿ ರಂಭಾಪುರಿ ಶಿವಾಚಾರ್ಯರಿಗೆ ನಜರ್ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.