ಹುಮನಾಬಾದ್: ವಿವಿಧ ಬೇಡಿಕೆಗಳು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದಿಂದ ತಾಲ್ಲೂಕಿನ ಹುಡಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ ಪೊಲೀಸರು ಹಾಗೂ ರೈತರ ನಡುವೆ ಗುರುವಾರ ವಾಗ್ವಾದ ನಡೆಯಿತು. ಸುಮಾರು 34ಕ್ಕೂ ಅಧಿಕ ರೈತರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಲಾಯಿತು.
ಮನವಿ ಪತ್ರವನ್ನು ಗ್ರೇಡ್-2 ತಹಶೀಲ್ದಾರ್ ಮಂಜುನಾಥ ಪಂಚಾಳ ಅವರಿಗೆ ರೈತ ಮುಖಂಡರು ಸಲ್ಲಿಸಿದರು. ನಂತರ ಸಂಘದ ಪ್ರಮುಖರು ಮಾತನಾಡಿ, ಬೇರೆ ರಾಜ್ಯಗಳಲ್ಲಿ ಕಬ್ಬು ಬೆಳೆಗಾರರಿಗೆ ಉತ್ತಮ ಬೆಂಬಲ ನೀಡಲಾಗಿದೆ. ಆದರೆ, ನಮ್ಮಲ್ಲಿನ ಕಬ್ಬು ಬೆಳೆಗಾರರಿಗೆ ಅನ್ಯಾಯವಾಗಿದೆ. ರಾಜ್ಯ ಸರ್ಕಾರ ಕೊಟ್ಟ ಮಾತಿಗೆ ತಪ್ಪಿದೆ ಎಂದು ಕಿಡಿಕಾರಿದರು.
ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರೈತರ ಹೊಲಗಳಲ್ಲಿ ದನಗಳ ಕೊಟ್ಟಿಗೆಗೆ ರಾತ್ರಿ ಹೊತ್ತಲ್ಲಿ ವಿದ್ಯುತ್ ಕೊಡಬೇಕು. ಎಮ್ಟಿ ಸಾಲಗಳ ಬಡ್ಡಿ ಮನ್ನಾ ಮಾಡಬೇಕು. ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ನಲ್ಲಿ ಎಲ್ಲ ರೈತರಿಗೆ ಬೆಳೆ ನಷ್ಟ ಪರಿಹಾರ ಕೊಡಬೇಕು. ಬೆಳೆ ವಿಮೆ ಕಟ್ಟದ ಎಲ್ಲ ರೈತರಿಗೆ ಸಂಪೂರ್ಣ ವಿಮಾ ಮೊತ್ತ ಕೊಡಬೇಕು ಎಂದರು.
ಬಸವಕಲ್ಯಾಣ ರೈತ ಸಂಘದ ಅಧ್ಯಕ್ಷ ಕಾಶಿನಾಥ ಬಿರಾದಾರ, ಹುಮನಾಬಾದ್ ರೈತ ಸಂಘದ ಉಪಾಧ್ಯಕ್ಷ ಕಾಶಿನಾಥ ಶಿರಶಟ್ಟಿ, ಮುಖಂಡರಾದ ಸೈಯದ್ ಅಜಂ, ಮುಖಿಮೋದ್ಧಿನ್ ನಂದಗಾಂವ, ಸಂತೋಷ ಬಿರಾದಾರ, ಸಚ್ಚಿದಾನಂದ ಸ್ವಾಮಿ, ಶಂಕರ ಬಸರೆಡ್ಡಿ, ವಿಠಲ್ರಾವ ಮೇತ್ರೆ, ಶ್ರೀಮಂತ ಬಾಲ್ಕೆ, ಮಹೇಶ ಡಾವರಗಾಂವ, ಸಂತೋಷ ಪಾಟೀಲ, ಸಂಗಮೇಶ ಪಾಟೀಲ, ಶಾಂತಮ್ಮ ಫೂಲಗೆ, ಅನ್ನಪೂರ್ಣಾ ಬಿರಾದಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.