ADVERTISEMENT

ಬಡತನದಲ್ಲೂ ಯಶಸ್ಸು ಸಾಧಿಸಬಹುದು

ಎಸಿ ಹುದ್ದೆಗೆ ಆಯ್ಕೆಗೊಂಡ ಸಾವಿತ್ರಿ ಮನದಾಳದ ಮಾತು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 10:36 IST
Last Updated 28 ಡಿಸೆಂಬರ್ 2019, 10:36 IST
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ಬಸವಕಲ್ಯಾಣ: ‘ಸಾಧನೆಗೆ ಬಡತನ ಅಡ್ಡಿಯಲ್ಲ. ಆತ್ಮವಿಶ್ವಾಸವಿದ್ದರೆ ಯಶಸ್ಸು ನಿಶ್ಚಿತ’ ಎಂದು ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಗೊಂಡಿರುವ ಸಾವಿತ್ರಿ ಕರಬಸಪ್ಪ ಬಿರಾದಾರ ಅಭಿಪ್ರಾಯಪಟ್ಟರು.

ರಾಷ್ಟ್ರಕವಿ ಕುವೆಂಪು ಕನ್ನಡ ವೇದಿಕೆ ಹಾಗೂ ಪದವಿಪೂರ್ವ ಉಪನ್ಯಾಸಕರ ಸಂಘದಿಂದ ಶುಕ್ರವಾರ ಇಲ್ಲಿನ ನೀಲಾಂಬಿಕಾ ಕಾಲೇಜಿನಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚಿಕ್ಕವಳಿದ್ದಾಗ ನಮ್ಮ ಶಾಲೆಗೆ ಬಂದಿದ್ದ ಉನ್ನತಮಟ್ಟದ ಅಧಿಕಾರಿಯನ್ನು ನೋಡಿ ಅವರಂತಾಗಬೇಕು ಎಂದು ಕನಸು ಕಂಡಿದ್ದೆ. ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಲೇ ಕೆಎಎಸ್ ಪರೀಕ್ಷೆ ಬರೆದೆ. ದೊಡ್ಡ ಗುರಿ ಇಟ್ಟುಕೊಂಡು ಸತತವಾಗಿ ಪರಿಶ್ರಮಪಡಬೇಕು. ಸಮಯ ಸದುಪಯೋಗ ಮಾಡಿಕೊಳ್ಳಬೇಕು. ಅದುವೆ ಗೆಲುವಿಗೆ ಸೋಪಾನವಾಗುತ್ತದೆ’ ಎಂದರು.

ADVERTISEMENT

ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಗೊಂಡಿರುವ ಇನ್ನೊಬ್ಬರಾದ ಸಾಯಿಪ್ರಸಾದ ಬೆಜಗಂ ಮಾತನಾಡಿ, ‘ಕೆಲಸದಲ್ಲಿ ಸ್ಪಷ್ಟತೆ ಇರಬೇಕು. ಧೈರ್ಯ, ತಾಳ್ಮೆಯನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.

ತೆರಿಗೆ ಇಲಾಖೆ ಹುದ್ದೆಗೆ ಆಯ್ಕೆಗೊಂಡಿರುವ ಡಾ.ಮಹೇಶ ಪಾಟೀಲ ಖೇರ್ಡಾ ಮಾತನಾಡಿ, ‘ಯಾವುದೇ ಪದವಿ ಓದಿದರೂ ಕೆಎಎಸ್, ಐಪಿಎಸ್, ಐಎಎಸ್ ಪರೀಕ್ಷೆಗಳನ್ನು ಉತ್ತೀರ್ಣ ಆಗುವ ಮೂಲಕ ದೊಡ್ಡ ಹುದ್ದೆಗಳನ್ನು ಅಲಂಕರಿಸಿ ಸಮಾಜಸೇವೆ ಕೈಗೊಳ್ಳಬಹುದು’ ಎಂದರು.

ಪದವಿಪೂರ್ವ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ನರಸಿಂಗರೆಡ್ಡಿ ಗದ್ಲೇಗಾಂವ ಮಾತನಾಡಿ, ‘ವಿದ್ಯಾರ್ಥಿಗಳು ಉತ್ತಮ ಸಾಧನೆ ಹಾಗೂ ಕಾರ್ಯ ಮಾಡಿದವರಿಂದ ಪ್ರೇರಣೆ ಪಡೆದು ಕುಟುಂಬದ ಹಾಗೂ ಹುಟ್ಟೂರಿನ ಕೀರ್ತಿ ಹೆಚ್ಚಿಸಬೇಕು’ ಎಂದರು.

ಪ್ರಾಚಾರ್ಯ ಸುರೇಶ ಅಕ್ಕಣ್ಣ ಮಾತನಾಡಿ, ‘ಶಿಕ್ಷಕರ, ಪಾಲಕರ ಹಾಗೂ ಸಮಾಜದ ಸಹಕಾರದಿಂದಲೇ ಉತ್ತಮ ಪ್ರತಿಭೆಗಳು ರೂಪುಗೊಳ್ಳುತ್ತವೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚಂದ್ರಕಾಂತಸ್ವಾಮಿ ನಾರಾಯಣಪುರ, ಉಪನ್ಯಾಸಕ ಬಸವರಾಜ ಹಿರೇಮಠ ಹಾಗೂ ಇಕ್ರಾಮೊದ್ದೀನ್ ಖಾದಿವಾಲೆ ಇದ್ದರು.

ಸಾಯಿಪ್ರಸಾದ, ಡಾ.ಮಹೇಶ ಪಾಟೀಲ ಹಾಗೂ ಸಾವಿತ್ರಿ ಬಿರಾದಾರ ಅವರನ್ನು
ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.