ಬೀದರ್: ‘ಜನಪದ ಝೇಂಕಾರ ಇಂದು ಮತ್ತೆ ದೇಶದೆಲ್ಲೆಡೆ ಮೊಳಗುತಿದೆ. ಆಧುನಿಕತೆಗೆ ಹೊಂದಿಕೊಂಡು ವಿವಿಧ ರೋಗಗಳಿಂದ ತೊಳಲಾಡುತ್ತಿರುವ ಇಂದಿನ ಜನತೆ ಮತ್ತೆ ಜನಪದ ಸಂಸ್ಕೃತಿ ಕಡೆಗೆ ವಾಲುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.
ನಗರದ ಸಿದ್ಧಾರೂಢ ಮಹಿಳಾ ಪದವಿ ಮಹಾವಿದ್ಯಾಲಯದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಬೀದರ್ ನಗರ ಘಟಕ ಆಯೋಜಿಸಿದ್ದ ‘ಶಾಲಾ ಕಾಲೇಜಿಗೊಂದು ಜನಪದ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
‘ಜನಪದದಿಂದ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ ವೃದ್ಧಿಸುತ್ತಿದೆ. ಈ ನಿಟ್ಟಿನಲ್ಲಿ ಜನಪದ ಸಂಸ್ಕೃತಿಯನ್ನು
ಪಸರಿಸುವಲ್ಲಿ ಯುವಕರ ಪಾತ್ರ ಮಹತ್ವದ್ಧಾಗಿದೆ’ ಎಂದು ಹೇಳಿದರು.
‘ಆಧುನಿಕತೆಯತ್ತ ವಾಲುತ್ತಿರುವ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಜನಪದ ಕಲೆ ಸಾಹಿತ್ಯ ಕುರಿತು ತಿಳಿಸುವಲ್ಲಿ ಕರ್ನಾಟಕ ಜಾನಪದ ಪರಿಷತ್ತು ಅವಿರತವಾಗಿ ಶ್ರಮಿಸುತ್ತಿದೆ’ ಎಂದು ತಿಳಿಸಿದರು.
‘ಎಲ್ಲಡೆ ಜನಪದ ಸೊಗಡು ಬೆಳೆಸಲು ಪರಿಷತ್ತಿನ ಜತೆ ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆ. ಜಗನ್ನಾಥ ಹೆಬ್ಬಾಳೆ ಮತ್ತು ರಾಜಕುಮಾರ ಹೆಬ್ಬಾಳೆ ಅವರು ಅನೇಕ ಜನಪದ ಕಲಾವಿದರಿಗೆ ರಾಜ್ಯ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಿಕೊಡುವ ಜತೆಗೆ ಅವರ ಪ್ರತಿಭೆ ಬೆಳಕಿಗೆ ಬರುವಂತೆ ಮಾಡಿದ್ದಾರೆ’ ಎಂದು ಹೇಳಿದರು.
‘ಮುಂಬರುವ ದಿನಗಳಲ್ಲಿ ಬೀದರ್ನಲ್ಲಿ ಅಂತರರಾಷ್ಟ್ರೀಯ ಜನಪದ ಉತ್ಸವ ಆಯೋಜಿಸಿದಲು ಸಿದ್ಧತೆ ನಡೆಸಿದ್ದಾರೆ.
ದೇಶ ವಿದೇಶಗಳ ಜನಪದ ಕಲಾವಿದರನ್ನು ಆಹ್ವಾನಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ’ ಎಂದರು.
ಕಜಾಪ ಬೀದರ್ ನಗರ ಘಟಕದ ಅಧ್ಯಕ್ಷ ಯೋಗೇಂದ್ರ ಯದಲಾಪುರೆ ಮಾತನಾಡಿ, ‘ಜನಪದ ಸಂಸ್ಕೃತಿ ಅತ್ಯಂತ ಸತ್ವಯುತವಾಗಿದೆ. ಒಡಪುಗಳು, ಹಾಡುಗಳು, ಇತರೆ ಕಲೆಗಳು ಅರ್ಥಪೂರ್ಣವಾಗಿವೆ’ ಎಂದು ತಿಳಿಸಿದರು.
‘ಜನಪದ ಸಂಸ್ಕೃತಿ ಉಳಿಸಲು ನಾವೆಲ್ಲ ಪ್ರಯತ್ನಿಸಬೇಕಿದೆ. ಯೋಗ ಸಹ ಜನಪದದ ಒಂದು ಭಾಗವಾಗಿದೆ. ಯೋಗಾಭ್ಯಾಸದ ಮೂಲಕ ಸದೃಢ ಆರೋಗ್ಯ ಕಾಯ್ದುಕೊಳ್ಳಬಹುದಾಗಿದೆ’ ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಪ್ರೊ.ಎಸ್.ಬಿ.ಬಿರಾದಾರ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ವಿ. ಜೂಜಾ ಅಧ್ಯಕ್ಷತೆ ವಹಿಸಿದ್ದರು.
ಎಸ್.ಬಿ.ಕುಚಬಾಳ, ಮಹಾರುದ್ರ ಡಾಕುಳಗೆ, ಪ್ರಕಾಶ ಕನ್ನಾಳೆ ಉಪಸ್ಥಿತರಿದ್ದರು. ಕಲಾವಿದರಾದ ನಾಗೇಶ ಜಾನಕನೋರ, ಅಂಜಲಿ ಹಳ್ಳೆ ಜಾನಪದ ಗೀತೆ ಕಾರ್ಯಕ್ರಮ ನಡೆಸಿಕೊಟ್ಟರು.
ಕಲ್ಯಾಣರಾವ್ ಬಂಬುಳಗೆ ಸ್ವಾಗತಿಸಿದರು. ನಿರ್ದೇಶಕ ಬಸವರಾಜ ಹೆಗ್ಗೆ ನಿರೂಪಿಸಿದರು. ನಿರ್ದೇಶಕರ ಧನರಾಜ ಆನೆಕಲೆ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.