ಬೀದರ್: ನಶಿಸಿ ಹೋಗುತ್ತಿರುವ ಜನಪದ ಸಾಹಿತ್ಯ ಸಂಸ್ಕೃತಿಯ ಸಂರಕ್ಷಕರು ಮತ್ತು ರಾಯಭಾರಿಗಳಾಗುವ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಹಿರಿಯ ರಂಗಕರ್ಮಿ ಮತ್ತು ಚಲನಚಿತ್ರ ನಟ ಅನಂತಕೃಷ್ಣ ದೇಶಪಾಂಡೆ ತಿಳಿಸಿದರು.
ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಕರ್ನಾಟಕ ಸಾಹಿತ್ಯ ಸಂಘ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಸೇರಿದ ನಗರದ ಸಿರಿಗನ್ನಡ ಪುಸ್ತಕ ಮಳಿಗೆಯ ಸಹಯೋಗದಲ್ಲಿ ಇತ್ತೀಚೆಗೆ ನಡೆದ ‘ಶಾಂತಮ್ಮ ಬಲ್ಲೂರ ನನ್ನವ್ವನ ಜನಪದ ಸಿರಿ’ ಸಂಪಾದಿತ ಕೃತಿಯ ತಿಂಗಳ ಪುಸ್ತಕ ಪರಿಚಯ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಜನಪದ ಸಾಹಿತ್ಯದಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳು ಅಡಗಿವೆ. ಬೇಂದ್ರೆಯವರು ತಮ್ಮ ಕೃತಿಗಳಲ್ಲಿ ಈ ಮೌಲ್ಯಗಳನ್ನು ಬಳಸಿಕೊಂಡು ಜನಮನದಲ್ಲಿ ಶಾಶ್ವತ ನೆಲೆ ಸಾಧಿಸಿದ್ದಾರೆ ಎಂದು ಹೇಳಿದರು.
ಶಾಂತಮ್ಮ ಬಲ್ಲೂರ ಅವರು ತಮ್ಮ ತಾಯಿ ಹಾಡಿದ ಜನಪದ ಹಾಡುಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ತಂದಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಪರ್ಧಾ ಸಂಕಲ್ಪ ಅಕಾಡೆಮಿಯ ಅಧ್ಯಕ್ಷ ನಾಗಯ್ಯ ಸ್ವಾಮಿ, ಪ್ರೊ. ರಾಜೇಂದ್ರ ಬಿರಾದಾರ, ಕೆ. ಸತ್ಯಮೂರ್ತಿ ಅವರು ಅತಿಥಿಗಳಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ, ಶಾಂತಮ್ಮ ಬಲ್ಲೂರ ಅವರ ಕಾರ್ಯ ಶ್ಲಾಘನೀಯ. ಪುಸ್ತಕ ಸಂಪಾದಕಿ ಶಾಂತಮ್ಮ ಬಲ್ಲೂರ ಅವರು ತಮ್ಮ ತಾಯಿಯ ಹಾಡುಗಳಿಂದಲೇ ಪ್ರೇರಿತನಾಗಿ ಈ ಕೃತಿ ರಚನೆ ಮಾಡಿದ್ದಾರೆ ಎಂದರು.
ರಾಜಕುಮಾರ ಹೆಬ್ಬಾಳೆ, ನಿಜಲಿಂಗಪ್ಪ ತಗಾರೆ, ಪಂಚಾಕ್ಷರಿ ಪುಣ್ಯಶೆಟ್ಟಿ, ತುಳಜಮ್ಮ ಬಲ್ಲೂರ ಇದ್ದರು. ಸುನೀತಾ ಕೂಡ್ಲಿಕರ್ ಪ್ರಾಸ್ತಾವಿಕ ಮಾತನಾಡಿದರು. ಅಂಬಿಕಾ ಬಿರಾದಾರ ಸ್ವಾಗತಿಸಿದರೆ, ವೈಜಿನಾಥ ಪಾಟೀಲ ನಿರೂಪಿಸಿದರು. ಮಲ್ಲಮ್ಮ ಸಂತಾಜಿ ಸ್ವಾಗತ ಗೀತೆ ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.