ADVERTISEMENT

‘ಎಸ್‌ಒಪಿ ಪಾಲನೆಗೆ ಆದ್ಯತೆ ನೀಡಿ’

ಭೌತಿಕ ತರಗತಿ: ಪೂರ್ವ ಸಿದ್ಧತಾ ಸಭೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:47 IST
Last Updated 4 ಸೆಪ್ಟೆಂಬರ್ 2021, 3:47 IST
ಭಾಲ್ಕಿ ತಾಲ್ಲೂಕಿನ ಕಲವಾಡಿ ಗ್ರಾಮದ ಮಹಾತ್ಮ ಗಾಂಧಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ನಡೆದ ಮುಖ್ಯಶಿಕ್ಷಕರ ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತರಾಯ ಹರನಾಳ ಮಾತನಾಡಿದರು
ಭಾಲ್ಕಿ ತಾಲ್ಲೂಕಿನ ಕಲವಾಡಿ ಗ್ರಾಮದ ಮಹಾತ್ಮ ಗಾಂಧಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ನಡೆದ ಮುಖ್ಯಶಿಕ್ಷಕರ ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತರಾಯ ಹರನಾಳ ಮಾತನಾಡಿದರು   

ಭಾಲ್ಕಿ: ಸೆಪ್ಟೆಂಬರ್‌ 6ರಿಂದ 6 ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳ ಎರಡನೇ ಹಂತದ ಭೌತಿಕ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಶಿಕ್ಷಕರು ಎಸ್‌ಒಪಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಕರ್ತವ್ಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತ ರಾಯ ಹರನಾಳ ಹೇಳಿದರು.

ತಾಲ್ಲೂಕಿನ ಕಲವಾಡಿ ಗ್ರಾಮದ ಮಹಾತ್ಮ ಗಾಂಧಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಎರಡನೇ ಹಂತದ ಶಾಲಾ ಪ್ರಾರಂಭೋತ್ಸವದ ಪೂರ್ವಭಾವಿಯಾಗಿ, ಮೊರಂಬಿ, ವರವಟ್ಟಿ (ಬಿ), ಖಟಕ ಚಿಂಚೋಳಿ, ಕಲವಾಡಿ ಸೇರಿ ಒಟ್ಟು ನಾಲ್ಕು ಕ್ಲಸ್ಟರ್‌ಗಳ ಮುಖ್ಯಶಿಕ್ಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಪಾಲಕರಿಂದ ತಮ್ಮ ಮಕ್ಕಳನ್ನು ಭೌತಿಕ ತರಗತಿಗೆ ಸ್ವ ಇಚ್ಛೆಯಿಂದ ಕಳುಹಿಸಿಕೊಡುವುದಾಗಿ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಬೇಕು. ಶಿಕ್ಷಕರು ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಬೇಕಿದೆ. ಶಿಕ್ಷಕರ ಯಾವುದೇ ಕಾರ್ಯಗಳಿದ್ದರೂ ಶಾಲಾ ಅವಧಿಯ ನಂತರ ನೇರವಾಗಿ ಸಂಪರ್ಕಿಸಿ ತಮ್ಮ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬೇಕು ಎಂದರು.

ADVERTISEMENT

ಸಿಆರ್‌ಪಿ ಸಂತೊಷ ವಾಡೆ ಮಾತನಾಡಿ, ಶಾಲಾ ಪ್ರಾರಂಭದ ದಿನದಿಂದಲೇ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳ ಹಾಜರಾತಿಯನ್ನು ಎಸ್‍ಎಟಿಎಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ಭರ್ತಿಮಾಡಬೇಕು. ವಿದ್ಯಾರ್ಥಿಗಳು ಶಾಲೆಗೆ ಬರಲು ಕಾತುರರಾಗಿದ್ದಾರೆ. ಅವರನ್ನು ಶಿಕ್ಷಕರು ಆದರದಿಂದ ಬರಮಾಡಿಕೊಳ್ಳಬೇಕು ಎಂದು ಹೇಳಿದರು.

ಬಿಆರ್‌ಪಿ ಆನಂದ ಹಳೆಂಬರೆ, ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿದರು. ಖಟಕಚಿಂಚೋಳಿ ಸಿಆರ್‌ಪಿ ವಿಜಯಕುಮಾರ, ವರವಟ್ಟಿ (ಬಿ) ಸಿಆರ್‌ ಪಿ ಸೊಮನಾಥ ಮೂಲಗೆ, ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಕಾರ್ಯದರ್ಶಿ ಅಶೋಕ ಕುಂಬಾರ, ಮುಖ್ಯ ಶಿಕ್ಷಕ ರಾಜಕುಮಾರ ಉಪಸ್ಥಿತರಿದ್ದರು. ಪ್ರಕಾಶ ಮಾಗಾವೆ ಸ್ವಾಗತಿಸಿ ಶಾಮಲಾ ನಿರೂಪಿಸಿದರು. ವಿಜಯಕುಮಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.