ಔರಾದ್ (ಬೀದರ್ ಜಿಲ್ಲೆ): ಪಟ್ಟಣದ ಶಿಕ್ಷಕರ ಕಾಲೊನಿಯ ಅಂಗನವಾಡಿ ಕೇಂದ್ರದ ಬಳಿಯಿರುವ ಸೆಪ್ಟಿಕ್ ಟ್ಯಾಂಕ್ನಲ್ಲಿ ಬಿದ್ದು ಬಾಲಕಿ ಸ್ಫೂರ್ತಿ (3) ಬುಧವಾರ ಮೃತಪಟ್ಟಿದ್ದಾಳೆ.
‘ಶಿಕ್ಷಕರ ಕಾಲೊನಿ ನಿವಾಸಿಗಳು, ಕೂಲಿಕಾರ್ಮಿಕ ಜೀವನ್ ಮತ್ತು ಶಿಲ್ಪಾ ದಂಪತಿ ತಮ್ಮ ಮೂವರು ಪುತ್ರಿಯರಾದ ಸಲೋಮಿ (4), ಸ್ಫೂರ್ತಿ (3) ಮತ್ತು ಸೃಷ್ಟಿ (ಒಂದೂವರೆ ವರ್ಷ)ಗೆ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದರು. ಮನೆಗೆ ಕರೆ ತರಲು ಶಿಲ್ಪಾ ಹೋದಾಗ, ಸ್ಫೂರ್ತಿ ಕಾಣಿಸಲಿಲ್ಲ. ಆಕೆಯ ಶವ ಸೆಪ್ಟಿಕ್ ಟ್ಯಾಂಕ್ನಲ್ಲಿ ಸಿಕ್ಕಿತು‘ ಎಂದು ಪೊಲೀಸರು ತಿಳಿಸಿದ್ದಾರೆ.
‘ಅಂಗನವಾಡಿ ಕಟ್ಟಡ ನಿರ್ಮಿಸಲು ಮಾಡಿದ್ದ ಸೆಪ್ಟಿಕ್ ಟ್ಯಾಂಕ್ ಮುಚ್ಚಿರಲಿಲ್ಲ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯ ನಿರ್ಲಕ್ಷ್ಯ ಕಂಡುಬಂದಿದೆ. ಇನ್ನಷ್ಟು ಮಾಹಿತಿ ಪಡೆದು, ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ತಿಳಿಸಿದ್ದಾರೆ.
ಬಾಲಕಿಯ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಂಘ ಸಂಸ್ಥೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.