ಭಾಲ್ಕಿ: ಮಠಗಳ ಅಧೀನದಲ್ಲಿ ನಡೆಯುತ್ತಿರುವ ಪ್ರಸಾದ ನಿಲಯಗಳು ಬಡ, ನಿರ್ಗತಿಕ ವಿದ್ಯಾರ್ಥಿಗಳಿಗೆ ವರವಾಗಿ ಪರಿಣಮಿಸಿದ್ದು, ಸಂಸ್ಕಾರಯುತ ಗುಣಾತ್ಮಕ ಶಿಕ್ಷಣ ನೀಡುತ್ತಿವೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರಮೇಶ ದೇವಮಾನೆ ಹೇಳಿದರು.
ಇಲ್ಲಿಯ ಚನ್ನಬಸವಾಶ್ರಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಹಾನಗಲ್ಲ ಕುಮಾರೇಶ್ವರ ಪ್ರಸಾದ ನಿಲಯದ ವಾರ್ಷಿಕೋತ್ಸವ, 249ನೇ ಮಾಸಿಕ ಶರಣ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು.
ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಡಾ.ಚನ್ನಬಸವ ಪಟ್ಟದ್ದೇವರು ಶಿವಯೋಗ ಮಂದಿರದಲ್ಲಿ ಅಧ್ಯಯನಗೈದು ಹಾನಗಲ್ಲ ಕುಮಾರೇಶ್ವರ ಶಿವಯೋಗಿಗಳ ಸನ್ನಿಧಾನದಲ್ಲಿ 1924ರಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಪಟ್ಟಾಧಿಕಾರ ವಹಿಸಿಕೊಂಡರು. 1936 ರಲ್ಲಿ ತೆಲಂಗಾಣದ ಮೋರ್ಗಿಯಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಶಾಂತಿವರ್ಧಕ ಕನ್ನಡ ಪಾಠಶಾಲೆ ಜೊತೆಗೆ ಪ್ರಸಾದ ನಿಲಯ ಸ್ಥಾಪಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ಭಾಷೆಯನ್ನು ಬೆಳೆಸಲು ಶ್ರಮಿಸಿದರು.
ಹಾಲಿಂಗ ಸ್ವಾಮೀಜಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತೀರ್ಣಾಧಿಕಾರಿ ವಿಜಯಮಾಲಾ ವಗ್ಗೆ, ರಮೇಶ ಪೂಜಾರ, ಉಪನ್ಯಾಸಕ ಶಿವರುದ್ರಯ್ಯ ಸ್ವಾಮಿ, ಸಂಜುಕುಮಾರ ಜುಮ್ಮಾ, ಸಂಗಯ್ಯ ಸ್ವಾಮಿ, ನವಲಿಂಗ ಪಾಟೀಲ, ಪ್ರಕಾಶ ದೇಶಮುಖ, ಅಂಬಿಕಾ ಹಣಮಂತಪ್ಪ, ವಿಜಯಕುಮಾರ ಪಾಟೀಲ, ಧನರಾಜ ಬಂಬುಳಗೆ, ಮೋಹನರೆಡ್ಡಿ, ಬಸವರಾಜ ಮಾಳಗೆ, ಸಂತೋಷ ಸುಂಧಾಳ, ಪ್ರಕಾಶ ಕೋರೆ, ಸಂಗಪ್ಪ ಸೊಲಪೂರೆ, ಭೀಮಾಶಂಕರ ಪಾಟೀಲ, ಪುಂಡಲಿಕ ಮಾಸಿಮಾಡೆ ಇದ್ದರು.
ಮುಂದಿನ ತಿಂಗಳು ಫೆಬ್ರುವರಿಯಲ್ಲಿ ನಡೆಯುವ ವಚನ ವಿಜಯೋತ್ಸವ ಸಮಾರಂಭಕ್ಕೆ ಆಗಮಿಸಲು ಪ್ರಭುದೇವರು ಭಾಲ್ಕಿಯ ಬಸವಭಕ್ತರಿಗೆ ಜ್ಯೋತಿ ನೀಡಿ ಆಹ್ವಾನಿಸಿದರು.
ಬಸವಕಲ್ಯಾಣದ ಅನುಭವಮಂಟಪ ಸದಸ್ಯ ಪಡೆದು ₹1ಲಕ್ಷ ಹಣವನ್ನು ದಾಸೋಹಕ್ಕೆ ಸಲ್ಲಿಸಿದ ಸುನಂದಾ ಬಸವರಾಜ ಥಮಕೆ ಅವರನ್ನು ಗೌರವಿಸಲಾಯಿತು.
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾಗಯ್ಯ ಸ್ವಾಮಿ ಸ್ವಾಗತಿಸಿದರು. ವೀರಣ್ಣ ಕುಂಬಾರ ನಿರೂಪಿದರು. ಮುಖ್ಯಶಿಕ್ಷಕ ಬಾಬು ಬೆಲ್ದಾಳ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.