ಹುಮನಾಬಾದ್: ತಾಲ್ಲೂಕಿನ ನಂದಗಾಂವ್ ಗ್ರಾಮ ಪಂಚಾಯಿತಿಯ ಹಣ ದುರ್ಬಳಕೆ ಮಾಡಿಕೊಂಡ ಹಿನ್ನಲೆಯಲ್ಲಿ ಅಧ್ಯಕ್ಷ ಮಹಾಂತೇಶ ಎಂ.ಕುಂದನ ಅವರನ್ನು ಸದಸ್ಯತ್ವದೊಂದಿಗೆ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಗ್ರಾಮೀಣಾಭಿವೃದ್ಧಿ ಪಂಚಾಯಿತಿ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ನಂದಗಾಂವ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿ ಸರ್ಕಾರಿ ಯೋಜನೆಗಳ ಕಾಮಗಾರಿಗೆ ಮಂಜೂರಾತಿ ಪಡೆಯದೆ, ಭೂ ಮಾಲೀಕರ ಪೂರ್ವಾನುಮತಿ ಪಡೆಯದೆ ಖಾಸಗಿ ಜಮೀನಿನಲ್ಲಿ ಕೆಲಸ ಮಾಡಿ ಕರ್ತವ್ಯಲೋಪ ಎಸಗಿದ್ದಾರೆ. ಇದರಿಂದ ಬಡ ರೈತರ ಉಪಯುಕ್ತ ಜಮೀನು ಪಾಳು ಬಿದ್ದಿದೆ. ರೈತರಿಗೆ ಈ ಸಂಬಂಧವಾಗಿ ಯಾವುದೇ ಹಣ ಕೂಡ ನೀಡಿಲ್ಲ ಎಂದು ಆರೋಪಿಸಲಾಗಿತ್ತು.
ನರೇಗಾ ಯೋಜನೆಯ ಮಾರ್ಗಸೂಚಿಗೆ ವಿರುದ್ಧವಾಗಿ ಮತ್ತು ನಿಯಮಬಾಹಿರವಾಗಿ ಕಾರ್ಯನಿರ್ವಹಿಸಿದ್ದು, ರಾತ್ರೋರಾತ್ರಿ ಜೆಸಿಬಿಯಿಂದ ಭೌತಿಕ ಕಾಮಗಾರಿ ನಿರ್ವಹಿಸಿ ನಿಯಮಾವಳಿ ಉಲ್ಲಂಘಿಸಿದ್ದಕ್ಕೆ ಸ್ಪಷ್ಟ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಿ ಸಲ್ಲಿಸಿದ ದೂರನ್ನು ಆಧರಿಸಿ ಪ್ರಾದೇಶಿಕ ಆಯುಕ್ತರು ಸಲ್ಲಿಸಿದ ವರದಿ ಆಧಾರದ ಮೇಲೆ ಪದಚ್ಯುತಿಗೊಳಿಸಲಾಗಿದೆ ಎಂದು ಅಧೀನ ಕಾರ್ಯದರ್ಶಿ ನವೀನಕುಮಾರ ಜಿ. ಆದೇಶದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.