ಬೀದರ್: ‘ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಬಸವಗಿರಿಯಲ್ಲಿ ಫೆ. 10 ರಿಂದ 12ರವರೆಗೆ 23ನೇ ವಚನ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳ ಅವಧಿಯಲ್ಲಿ ಅನೇಕ ಕಾರ್ಯಕ್ರಮಗಳು ಜರುಗಲಿವೆ’ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಗಂಗಾಂಬಿಕೆ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 10ರಂದು ಬೆಳಿಗ್ಗೆ 8ಕ್ಕೆ ಷಟಸ್ಥಲ ಧ್ವಜಾರೋಹಣ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜಾ ಯೋಗದೊಂದಿಗೆ ವಚನ ವಿಜಯೋತ್ಸವ ಆರಂಭವಾಗಲಿದೆ. ಬೆಳಿಗ್ಗೆ 11ಕ್ಕೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ವಚನ ವಿಜಯೋತ್ಸವ ಹಾಗೂ ಸಾಮರಸ್ಯ ಗೋಷ್ಠಿಗೆ ಚಾಲನೆ ನೀಡುವರು. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ, ವಚನ ವಿಜಯೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
ಪೌರಾಡಳಿತ ಸಚಿವ ರಹೀಂ ಖಾನ್ ಅವರು ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವರು. ಧಮ್ಮಾನಂದ ಮಹಾಥೆರೋ, ನೆಲ್ಸನ್ ಸುಮಿತ್ರ, ಬಲವಂತಸಿಂಗ್, ಕಾಜಿ ಎಸ್.ಎಚ್. ಸಮ್ಮುಖ ವಹಿಸುವರು. ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕಾಂಗ್ರೆಸ್ ಮುಖಂಡ ರಾಜಶೇಖರ ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು. ಮೈಸೂರಿನ ಶಂಕರ ದೇವನೂರು ಅನುಭಾವ ನೀಡುವರು ಎಂದು ತಿಳಿಸಿದರು.
ಮಧ್ಯಾಹ್ನ 3ಕ್ಕೆ ಜರುಗುವ ‘ವಚನ ಸಾಹಿತ್ಯದ ವಿವಿಧ ಆಯಾಮಗಳು’ ಗೋಷ್ಠಿಯನ್ನು ಮಾಜಿ ಸಂಸದ ಉಮೇಶ ಜಾಧವ್ ಉದ್ಘಾಟಿಸುವರು. ಹುಬ್ಬಳ್ಳಿಯ ಶಶಿಧರ ಕರವೀರ ಶೆಟ್ಟರ್ ಅನುಭಾವ ನೀಡುವರು. ಸಂಜೆ 6ಕ್ಕೆ ‘ಮಹಾಕ್ರಾಂತಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
11 ರಂದು ಬೆಳಿಗ್ಗೆ 8ಕ್ಕೆ ನಡೆಯುವ ಸಾಮೂಹಿಕ ವಚನ ಪಾರಾಯಣವನ್ನು ಡಾ. ಗುರಮ್ಮ ಸಿದ್ಧಾರೆಡ್ಡಿ, ಮಧ್ಯಾಹ್ನ 3ಕ್ಕೆ ಜರುಗುವ ಯೋಗ ಆರೋಗ್ಯ ಗೋಷ್ಠಿಯನ್ನು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಉದ್ಘಾಟಿಸುವರು. ಸಂಜೆ 6ಕ್ಕೆ ಸಾಂಸ್ಕೃತಿಕ ಸೌರಭ ನಡೆಯಲಿದ್ದು, ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಸಹಯೋಗದಲ್ಲಿ ವಿವಿಧ ರಾಜ್ಯಗಳ ಕಲಾ ತಂಡದವರು ಕಲಾ ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ಫೆ. 12ರಂದು ಬೆಳಿಗ್ಗೆ 9ಕ್ಕೆ ಮೆರವಣಿಗೆ, ಮಧ್ಯಾಹ್ನ 2ಕ್ಕೆ ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ ಜರುಗಲಿದೆ. ಬಸವಲಿಂಗ ಪಟ್ಟದ್ದೇವರು, ಕೂಡಲಸಂಗಮದ ಮಾತೆ ಗಂಗಾದೇವಿ, ಇಳಕಲ್ ಗುರುಮಹಾಂತ ಸ್ವಾಮೀಜಿ, ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಅಕ್ಕ ಗಂಗಾಂಬಿಕೆ ಸಾನ್ನಿಧ್ಯ ವಹಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು. ಸಂಸದ ಸಾಗರ್ ಖಂಡ್ರೆ, ಶಾಸಕರಾದ ಪ್ರಭು ಚವಾಣ್, ಶರಣು ಸಲಗರ್, ಶಶಿಕಲಾ ಜೊಲ್ಲೆ, ಡಾ. ಸಿದ್ದು ಪಾಟೀಲ, ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಎಂ.ಜಿ. ಮುಳೆ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬುವಾಲಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ, ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ, ವಚನ ವಿಜಯೋತ್ಸವ ಕಾರ್ಯಾಧ್ಯಕ್ಷ ವಿಶ್ವನಾಥ ಕಾಜಿ, ಮೆರವಣಿಗೆ ಸಮಿತಿಯ ಅಧ್ಯಕ್ಷ ಜೈರಾಜ್ ಖಂಡ್ರೆ, ಪ್ರಮುಖರಾದ ರಾಜೇಂದ್ರಕುಮಾರ ಗಂದಗೆ, ಧನರಾಜ ಹಂಗರಗಿ, ಶಂಕರೆಪ್ಪ ಹೊನ್ನಾ, ಚಂದ್ರಕಾಂತ ಮಿರ್ಚೆ, ವಚನ ವಿಜಯೋತ್ಸವ ಮಾಧ್ಯಮ ಸಮಿತಿಯ ಸಂಯೋಜಕ ವಿರೂಪಾಕ್ಷ ಗಾದಗಿ, ವೀರಭದ್ರಪ್ಪ ಬುಯ್ಯಾ, ಬಸವರಾಜ ಪಾಟೀಲ ಹಾರೂರಗೇರಿ, ರಾಚಪ್ಪ ಪಾಟೀಲ, ಶಿವರಾಜ ಮದಕಟ್ಟಿ, ಪ್ರಕಾಶ್ ಸಾವಳಗಿ, ನಂದಕುಮಾರ ಪಾಟೀಲ, ಸುರೇಶ ಅಲಿಯಂಬರ್, ಸಂಜುಕುಮಾರ, ಶಿವಶಂಕರ ಟೋಕರೆ, ಉಷಾ ಮಿರ್ಚೆ, ಜ್ಞಾನದೇವಿ ಬಕ್ಕಚೌಡಿ, ಜಗದೇವಿ ಮದಕಟ್ಟಿ, ವಿದ್ಯಾವತಿ ಉಂಡೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.