ಭಾಲ್ಕಿ: ಸಮಾಜದ ಸಂಘಟನೆಯ ಹಿತದೃಷ್ಟಿಯಿಂದ ಬಸವಣ್ಣನವರ ವಚನಗಳಲ್ಲಿ ತಿದ್ದುಪಡಿಯಾಗಿದ್ದ ಲಿಂಗದೇವ ಅಂಕಿತನಾಮವನ್ನು ಬದಲಾಯಿಸಿ ಮೂಲ ಅಂಕಿತ ನಾಮವಾದ ಕೂಡಲಸಂಗಮದೇವ ಬಳಸುವುದಾಗಿ ಬಸವಧರ್ಮ ಪೀಠದ ಜಗದ್ಗುರು ಮಾತೆ ಗಂಗಾ ಮಾತಾಜಿ ಘೋಷಣೆ ಮಾಡಿರುವುದು ಹರ್ಷದ ಸಂಗತಿ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಂಗಾ ಮಾತಾಜಿ ಅವರ ನಿರ್ಧಾರದಿಂದ ಸಮಸ್ತ ಬಸವಭಕ್ತರ ಅಂತರಾಳದ ಮಹದಾಸೆ ಈಡೇರಿದ್ದು, ಈ ನಿರ್ಧಾರದ ಮೂಲಕ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ, ಬಸವಭಕ್ತರ ಸಂಘಟನೆಗೆ ಮತ್ತಷ್ಟು ಬಲ ತುಂಬಿದ್ದಾರೆ. ಅವರ ಈ ನಿರ್ಣಯವನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.
ಖಂಡ್ರೆ ಸ್ವಾಗತ: ಬಸವಣ್ಣನವರ ವಚನಗಳಿಗೆ ಕೂಡಲ ಸಂಗಮದೇವ ವಚನಾಂಕಿತ ಬಳಸುವ ನಿರ್ಧಾರ ಕೈಗೊಂಡಿರುವ ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರ ಹೇಳಿಕೆಯನ್ನು ಸ್ವಾಗತಿಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬಸವತತ್ವ ಪ್ರಚಾರ ಮತ್ತು ಪ್ರಸಾರದ ಜತೆಗೆ ಧರ್ಮ ಸಂಘಟನೆಯಲ್ಲಿ ಲಿಂಗೈಕ್ಯೆ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಮತ್ತು ಮಾತೆ ಗಂಗಾದೇವಿ ಅವರ ಕೊಡುಗೆ ದೊಡ್ಡದಿದೆ.
ಬಸವ ಧರ್ಮ ಪೀಠದಿಂದ ಪ್ರಕಟ ಆಗುವ ಬಸವಣ್ಣನವರ ವಚನಗಳಿಗೆ ಕೂಡಲ ಸಂಗಮದೇವ ಎಂಬ ವಚನಾಂಕಿತ ಬಳಸಬೇಕು ಎನ್ನುವುದು ಬಸವ ಭಕ್ತರ ಬಹುದಿನಗಳ ಬೇಡಿಕೆ ಆಗಿತ್ತು. ಹಾಗಾಗಿ, ಇದೊಂದು ಒಳ್ಳೆಯ ಬೆಳವಣಿಗೆ. ಈ ಒಂದು ಹೇಳಿಕೆಯಿಂದ ಧರ್ಮ, ಸಮುದಾಯ ಒಗ್ಗೂಡುವ ಕಾಲ ಸನ್ನಿಹಿತವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.