ಭಾಲ್ಕಿ: ‘ಹಾರಕೂಡದ ಚನ್ನವೀರ ಶಿವಾಚಾರ್ಯರು ಬಸವಕಲ್ಯಾಣದಲ್ಲಿ ಮನುಷ್ಯರ ಹೆಗಲಿನ ಮೇಲೆ ಅಡ್ಡಪಲ್ಲಕ್ಕಿ ಮಾಡುವುದು ಸೂಕ್ತವಲ್ಲ. ಹೀಗಾಗಿ ತಾವು ಗೌರವಾಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ. ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ’ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಹಾರಕೂಡ ಶಿವಾಚಾರ್ಯರ ಈ ನಿರ್ಧಾರ ನಾಡಿನ ಸಮಸ್ತ ಬಸವಭಕ್ತರಿಗೆ ಸಂತೋಷವನ್ನುಂಟು ಮಾಡಿದೆ. ಪೂಜ್ಯರ ಈ ಬಸವತತ್ವಪರ ನಿಲುವು ಸ್ವಾಗತಾರ್ಹ’ ಎಂದು ಅವರು ಹೇಳಿದ್ದಾರೆ.
ದಸರಾ ದರ್ಬಾರ-ಅಡ್ಡಪಲ್ಲಕ್ಕಿ ಕಾರ್ಯಕ್ರಮದ ಗೌರವಾಧ್ಯಕ್ಷರಾಗಿರುವ ಹಾರಕೂಡದ ಪೂಜ್ಯರು ಮೊದಲೇ ರಂಭಾಪುರಿ ಶ್ರೀಗಳಿಗೆ ಬಸವಕಲ್ಯಾಣದ ನೆಲದಲ್ಲಿ ಅಡ್ಡಪಲ್ಲಕ್ಕಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅದಕ್ಕೆ ರಂಭಾಪುರಿ ಶ್ರೀಗಳು ಮೊದಲು ಅನುಮತಿ ಸೂಚಿಸಿದ್ದರು. ಆದರೆ ಇತ್ತೀಚಿನ ದಿನಮಾನಗಳಲ್ಲಿ ದಸರಾ ದರ್ಬಾರದ ಅಂಗವಾಗಿ ಅಡ್ಡಪಲ್ಲಕ್ಕಿ ಮನುಷ್ಯರ ಹೆಗಲ ಮೇಲೆ ಮಾಡಲಾಗುತ್ತದೆ ಎಂದು ಹಟ ಹಿಡಿದರು. ಈ ವಿಷಯ ಹಾರಕೂಡ ಪೂಜ್ಯರಿಗೆ ನೋವನ್ನುಂಟು ಮಾಡಿದೆ ಎಂದು ಬಸವಲಿಂಗ ಪಟ್ಟದ್ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.