ADVERTISEMENT

ಖಟಕಚಿಂಚೋಳಿ: ಮೂರ್ತಿ ತಯಾರಕರ ಸಂಕಷ್ಟ

ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ, ನೆಲಕಚ್ಚಿದ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 3:52 IST
Last Updated 10 ಆಗಸ್ಟ್ 2021, 3:52 IST
ಖಟಕಚಿಂಚೋಳಿ ಸಮೀಪದ ಬ್ಯಾಲಹಳ್ಳಿ(ಕೆ) ಗ್ರಾಮದ ಶಂಕರ ವಡ್ಡರ್ ಅವರು ನಂದಿ ವಿಗ್ರಹ ಸಿದ್ಧಪಡಿಸುತ್ತಿರುವುದು
ಖಟಕಚಿಂಚೋಳಿ ಸಮೀಪದ ಬ್ಯಾಲಹಳ್ಳಿ(ಕೆ) ಗ್ರಾಮದ ಶಂಕರ ವಡ್ಡರ್ ಅವರು ನಂದಿ ವಿಗ್ರಹ ಸಿದ್ಧಪಡಿಸುತ್ತಿರುವುದು   

ಖಟಕಚಿಂಚೋಳಿ: ಸಮೀಪದ ಬ್ಯಾಲಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಕಲ್ಲಿನ ಮೂರ್ತಿ ತಯಾರಕರಾದ ಕಲ್ಲವಡ್ಡರರು ಕೋವಿಡ್ ಹರಡುವಿಕೆಯಿಂದ ವ್ಯಾಪಾರವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಲ್ಲಿನ ಮೂರ್ತಿಗಳ ತಯಾರಕರಾದ ಕಲ್ಲವಡ್ಡರರು ತಮ್ಮ ನೈಪುಣ್ಯತೆಯನ್ನು ಬಳಸಿ ಸಾರ್ವಜನಿಕರ ಮನದಲ್ಲಿ ಶ್ರದ್ಧಾ, ಮನೋಭಾವ ಹುಟ್ಟುವಂತೆ ಮಾಡುವ ಕಲೆಗಾರರು. ಪ್ರತಿ ವರ್ಷ ಶ್ರಾವಣದಲ್ಲಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿರುತ್ತಿತ್ತು. ಆದರೆ ಕೋವಿಡ್ ಹರಡುವಿಕೆಯಿಂದ ಸರ್ಕಾರ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ ಹೇರಿರುವುದರಿಂದ ಮೂರ್ತಿಗಳ ಬೇಡಿಕೆ ಇಲ್ಲದಂತಾಗಿದೆ. ಹೀಗಾಗಿ ಜೀವನದ ನಿರ್ವಹಣೆಗೆ ಪರದಾಡುವಂತಾಗಿದೆ.

ಗ್ರಾಮದ ಹೊರವಲಯದಲ್ಲಿ ನೆಲೆಸಿರುವ ಕಲ್ಲವಡ್ಡರರು ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಿಂದ ಕಲ್ಲುಗಳನ್ನು ತಂದು ಅಂದ ಚೆಂದದ ವಿವಿಧ ಬಗೆಯ ಮೂರ್ತಿಗಳು ಸೇರಿದಂತೆ ಉತ್ತಮ ಗೃಹ ಬಳಕೆ ವಸ್ತುಗಳನ್ನು ತಯಾರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ADVERTISEMENT

ಪುರುಷರು ಕಲ್ಲು ಕೆತ್ತಿ ಬೀಸುವಕಲ್ಲು, ಒಳಕಲ್ಲು ಸೇರಿದಂತೆ ಗೃಹ ಉಪಯೋಗಿ ವಸ್ತುಗಳನ್ನು ತಯಾರಿಸುತ್ತಿದ್ದರು. ನಾವು ವಿವಿಧ ಗ್ರಾಮಗಳಿಗೆ ಸುತ್ತಾಡಿ ಮಾರಾಟ ಮಾಡುತ್ತೇವೆ. ಆದರೆ ಸದ್ಯ ಎಲ್ಲವೂ ಯಾಂತ್ರಿಕವಾಗಿರುವುದರಿಂದ ಇವುಗಳನ್ನು ಕೇಳುವವರೇ ಇಲ್ಲದಂತಾಗಿದೆ. ಕೊರೊನಾದಿಂದ ಗ್ರಾಮೀಣ ಪ್ರದೇಶದಲ್ಲಿ ಕಲ್ಲುಗಳ ಮಾರಾಟ ಆಗುತ್ತಿಲ್ಲ. ಹೀಗಾಗಿ, ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ ಎಂದು ಚಂದ್ರಮ್ಮ ವಡ್ಡರ್ ತಮ್ಮ ಅಳಲನ್ನು ತೋಡಿಕೊಂಡರು.

ಹಿಂದೆ ಮೂರ್ತಿಗಳ ಬೇಡಿಕೆಯು ಹೆಚ್ಚಾಗಿತ್ತು. ಹೀಗಾಗಿ ಪ್ರತಿ ತಿಂಗಳು ಖರ್ಚು ವೆಚ್ಚ ಹೋಗಿ ₹25 ರಿಂದ ₹30 ಸಾವಿರ ಲಾಭ ಆಗುತ್ತಿತ್ತು. ಸದ್ಯ ಕೊರೊನಾದ ಕರಿ ನೆರಳಿಗೆ ಸಿಲುಕಿ ಕಳೆದ ನಾಲ್ಕು ತಿಂಗಳಿಂದ ಯಾವುದೇ ಒಂದು ಮೂರ್ತಿಯೂ ಸಹ ಮಾರಾಟವಾಗಿಲ್ಲ. ಇದರಿಂದ ಬದುಕು ಸಾಗಿಸುವುದು ತುಂಬಾ ಕಷ್ಟಕರವಾಗಿದೆ. ಸಾಲ ಮಾಡಿಕೊಂಡು ಬದುಕು ನಡೆಸುತ್ತಿದ್ದೇವೆ ಎಂದು ಶಂಕರ ವಡ್ಡರ್ ತಮ್ಮ ಅಸಹಾಯಕತೆಯನ್ನುಹೊರಹಾಕಿದರು.

ಗುಡಿಸಲಿನಲ್ಲಿ ಸುಮಾರು ವರ್ಷಗಳಿಂದ ವಾಸವಾಗಿರುವ ಗಂಗಾರಾಮ್ ಕಲ್ಲವಡ್ಡರ ಅವರ ಕುಟುಂಬ ಕೊರೊನಾಕ್ಕೆ ಸಿಲುಕಿಕೊಂಡು ಅತಂತ್ರವಾಗಿದೆ. ನಿತ್ಯ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಒಳಕಲ್ಲು, ಕಾರುಕಲ್ಲು, ಬೀಸುಕಲ್ಲುಗಳು ಸೇರಿದಂತೆ ಕಲ್ಲಿನ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿದೆ. ಆದರೆ ಈ ಉದ್ಯೋಗ ಬಿಟ್ಟು ಇವರಿಗೆ ಬೇರಾವುದೇ ಉದ್ಯೋಗ ಗೊತ್ತಿಲ್ಲ. ಹೀಗಾಗಿ ಅವರ ನೆಮ್ಮದಿಯ ಜೀವನಕ್ಕೆ ಕುತ್ತು ಬಂದಿದೆ ಎನ್ನುತ್ತಾರೆ ಶಿವಪುತ್ರ ಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.