ADVERTISEMENT

ಬೀದರ್‌: ನಿರಂತರ ಮಳೆಗೆ ಹೆಸರು, ಉದ್ದಿಗೆ ಕುತ್ತು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 19 ಆಗಸ್ಟ್ 2025, 5:29 IST
Last Updated 19 ಆಗಸ್ಟ್ 2025, 5:29 IST
ಸತತ ಮಳೆಗೆ ಬೀದರ್‌ ಹೊರವಲಯದ ಬೆನಕನಳ್ಳಿ ರಸ್ತೆಯಲ್ಲಿರುವ ಗಣಪತಿ ಮಾರುತಿ ಎಂಬುವರಿಗೆ ಸೇರಿದ ಹೊಲದಲ್ಲಿ ಅಪಾರ ನೀರು ಸಂಗ್ರಹೊಂಡಿದೆ
ಸತತ ಮಳೆಗೆ ಬೀದರ್‌ ಹೊರವಲಯದ ಬೆನಕನಳ್ಳಿ ರಸ್ತೆಯಲ್ಲಿರುವ ಗಣಪತಿ ಮಾರುತಿ ಎಂಬುವರಿಗೆ ಸೇರಿದ ಹೊಲದಲ್ಲಿ ಅಪಾರ ನೀರು ಸಂಗ್ರಹೊಂಡಿದೆ   

ಬೀದರ್‌: ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹೆಸರು, ಉದ್ದಿಗೆ ಕುತ್ತು ಬಂದೊದಗಿದ್ದು, ರೈತರು ಚಿಂತಾಕ್ರಾಂತರಾಗಿದ್ದಾರೆ.

ಈ ಸಲ ಹೆಸರು ಮತ್ತು ಉದ್ದು ಉತ್ತಮ ರೀತಿಯಲ್ಲಿ ಬೆಳೆದಿದೆ. ರೈತರು ಇನ್ನೇನು ಬೆಳೆ ಕಟಾವು ಮಾಡಿ, ರಾಶಿ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ಎಡೆಬಿಡದೆ ಸುರಿಯುತ್ತಿರುವ ಮಳೆ ಅವರ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉದ್ದು, ಹೆಸರಿನ ಬೆಳೆ ನಡುವೆ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ. ರೈತರ ಕಣ್ಣೆದುರಲ್ಲೇ ಬೆಳೆ ಮಣ್ಣು ಪಾಲಾಗುತ್ತಿದ್ದರೂ ಅವರು ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ.

ADVERTISEMENT

ಒಂದೆರಡು ದಿನಗಳ ವರೆಗೆ ಬಿಡುವು ಕೊಟ್ಟರೂ ಹೇಗೋ ಅಲ್ಪ ಸ್ವಲ್ಪ ಬೆಳೆಯಾದರೂ ಉಳಿಸಿಕೊಳ್ಳಬಹುದು ಎಂಬುದು ರೈತರ ವಿಚಾರ. ಆದರೆ, ಮಳೆರಾಯ ಕೊಂಚವೂ ಬಿಡುವಿಲ್ಲದೆ ಧೋ.. ಎಂದು ಒಂದೇ ಸಮನೆ ಸುರಿಯುತ್ತಿದ್ದಾನೆ.

ಜಿಲ್ಲೆಯಲ್ಲಿ ಸೋಯಾ ಅವರೆ, ತೊಗರಿ, ಕಬ್ಬು ಹೆಚ್ಚಿನ ಪ್ರದೇಶದಲ್ಲಿ ಬೆಳೆದಿದ್ದು, ಸದ್ಯಕ್ಕೆ ಮಳೆಯಿಂದ ಈ ಬೆಳೆಗಳಿಗೆ ಯಾವುದೇ ಸಮಸ್ಯೆ ಇಲ್ಲ. ಹೆಚ್ಚಿನ ತೇವಾಂಶ ತಡೆದುಕೊಳ್ಳುವ ಶಕ್ತಿ ಈ ಬೆಳೆಗಳಿಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಮಳೆ ಬೇಕೆಂದಾಗ ಸುರಿಯುವುದಿಲ್ಲ. ಬೇಡವೆಂದಾಗ ಸುರಿಯುತ್ತದೆ. ನಾಲ್ಕೈದು ದಿನ ಮಳೆ ಬಿಡುವು ಕೊಟ್ಟರೆ ಉದ್ದು, ಹೆಸರು ರಾಶಿ ಮಾಡಬಹುದು. ಆದರೆ, ಮಳೆ ಸ್ವಲ್ಪವೂ ಬಿಡುವು ಕೊಡುತ್ತಿಲ್ಲ. ಹಾಕಿದ ಬಂಡವಾಳವೂ ಕೈಸೇರುವ ಸಾಧ್ಯತೆ ಇಲ್ಲ’ ಎಂದು ಕಮಠಾಣದ ರೈತ ಬಸವರಾಜ್‌ ಬೇಸರದಿಂದ ನುಡಿದರು.

‘ಪ್ರಕೃತಿಯ ಮೇಲೆ ಯಾರದ್ದೂ ನಡೆಯುವುದಿಲ್ಲ. ಕೊಂಚ ಬಿಡುವು ಕೊಟ್ಟರೆ ಉದ್ದು, ಹೆಸರು ಉಳಿಯುತ್ತದೆ. ಆದರೆ, ಮಳೆ ನಿಲ್ಲುವ ಲಕ್ಷಣಗಳೇ ಕಾಣಸುತ್ತಿಲ್ಲ. ಎತ್ತರದ ಪ್ರದೇಶದಲ್ಲಿರುವ ರೈತರಿಗೆ ಇನ್ನೊಂದು ವಾರ ಕಾಲಾವಕಾಶ ಇದೆ. ಆದರೆ, ತಗ್ಗು ಪ್ರದೇಶದಲ್ಲಿ ಬೆಳೆ ಉಳಿಯುವುದು ಅನುಮಾನ’ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್‌.

ಬೀದರ್‌ನ ದೇವಿ ಕಾಲೊನಿಯ ರಸ್ತೆಯಲ್ಲಿ ಸಂಗ್ರಹಗೊಂಡಿರುವ ಮಳೆ ನೀರು
ಈಗ ಉದ್ದು ಹೆಸರು ರಾಶಿ ಮಾಡುವ ಸಮಯ. ಆದರೆ ಮಳೆ ಸುರಿಯುತ್ತಿರುವುದರಿಂದ ಕಟಾವು ಸಾಧ್ಯವಾಗಿಲ್ಲ. ಮಳೆ ಬಿಡುವು ಕೊಡದಿದ್ದರೆ ಬೆಳೆ ಹಾಳಾಗುವ ಸಾಧ್ಯತೆ ಹೆಚ್ಚಿದೆ.
–ದೇವಿಕಾ ಆರ್‌. ಜಂಟಿ ಕೃಷಿ ನಿರ್ದೇಶಕಿ ಬೀದರ್‌

ಒಂದೇ ದಿನ 30 ಸೆಂ.ಮೀ ಮಳೆ ಭಾನುವಾರದಿಂದ ಸೋಮವಾರದ (ಆ.17ರಿಂದ 18) ನಡುವೆ ಬೀದರ್‌ ಜಿಲ್ಲೆಯಲ್ಲಿ ಶೇಕಡಾ 574ರಷ್ಟು ಮಳೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿ ತಿಳಿಸಿದೆ. ಜಿಲ್ಲಾಡಳಿತವು ಒಂದೇ ದಿನ 30 ಸೆಂ.ಮೀ. ದಾಖಲೆ ಮಳೆಯಾಗಿದೆ ಎಂದು ತಿಳಿಸಿದೆ. ಅದರಲ್ಲೂ ಜಿಲ್ಲೆಯ ಕಮಲನಗರ ಹಾಗೂ ಔರಾದ್‌ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚು ಮಳೆ ದಾಖಲಾಗಿದೆ. ಅತಿ ಹೆಚ್ಚು ಹಾನಿ ಕೂಡ ಸಂಭವಿಸಿದ್ದು ಈ ಎರಡು ತಾಲ್ಲೂಕುಗಳ ವ್ಯಾಪ್ತಿಯಲ್ಲಿ. ಸ್ಥಳೀಯರು ಇದನ್ನು ಮೇಘ ಸ್ಫೋಟ ಎಂದು ಹೇಳಿಕೊಂಡಿದ್ದಾರೆ.

ಸಂತ್ರಸ್ತರಿಗೆ ಪರಿಹಾರಕ್ಕೆ ಬಿಜೆಪಿ ಆಗ್ರಹ
ಬೀದರ್‌: ಔರಾದ್‌ ಹಾಗೂ ಕಮಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಮೇಘ ಸ್ಫೋಟ ಸಂಭವಿಸಿ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು ಜಿಲ್ಲೆಯ ಇಬ್ಬರು ಸಚಿವರು ಸ್ಥಳದಲ್ಲೇ ಠಿಕಾಣಿ ಹೂಡಿ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕೆಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಬಿರಾದಾರ ಒತ್ತಾಯಿಸಿದ್ದಾರೆ. ಬೀದರ್‌ ಜಿಲ್ಲೆಯ ಇತಿಹಾಸದಲ್ಲಿಯೇ ಇಷ್ಟೊಂದು ಮಳೆ ಎಂದೂ ಬಿದ್ದಿರಲಿಲ್ಲ. ಭಾರಿ ಮಳೆಗೆ ಭಾರಿ ಹಾನಿ ಆಗಿದೆ. ಕೂಡಲೇ ರೈತರು ಸಾರ್ವಜನಿಕರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ.
ಪರಿಹಾರ–ರಕ್ಷಣಾ ಕಾರ್ಯಕ್ಕೆ ಸಚಿವರ ಸೂಚನೆ
ಬೀದರ್‌: ಜಿಲ್ಲೆಯ ಕಮಲನಗರ ಹಾಗೂ ಔರಾದ್‌ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆಯಿಂದಾದ ಹಾನಿ ಜಾನುವಾರುಗಳ ಸಾವಿಗೆ ಆಘಾತ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಕೂಡಲೇ ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದಾರೆ. ಜಿಲ್ಲಾಧಿಕಾರಿ ಸೋಮವಾರ ಅಧಿಕೃತ ಟಿಪ್ಪಣಿ ಕಳಿಸಿ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಕಡಿತಗೊಂಡಿರುವ ರಸ್ತೆ ವಿದ್ಯುತ್ ಸಂಪರ್ಕ ಮರು ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ತತ್ ಕ್ಷಣದ ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಬೆಳೆ ಹಾನಿ ಮತ್ತು ಜಾನುವಾರು ಹಾನಿಯ ಬಗ್ಗೆ 24 ಗಂಟೆಯೊಳಗೆ ಪ್ರಾಥಮಿಕ ವರದಿ ಸಲ್ಲಿಸಬೇಕೆಂದು ನಿರ್ದೇಶನ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.