ಕಮಲನಗರ: ತಾಲ್ಲೂಕು ಸರ್ಕಾರಿ ಆಸ್ಪತ್ರೆ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸರಿಪಡಿಸಬೇಕು. ಔಷಧ ಕೊರತೆ ನೀಗಿಸಬೇಕು ಎಂದು ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘ ವತಿಯಿಂದ ತಹಶೀಲ್ದಾರ್ ನಾಗರಾಜ ಕೆ. ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘಟನೆ ರಾಜ್ಯಾಧ್ಯಕ್ಷ ಓಂಕಾರ ಸೋಲಾಪುರೆ ಮಾತನಾಡಿ, ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದು, ಸಮಯ ಪಾಲನೆಯಾಗುತ್ತಿಲ್ಲ. ಜತೆಗೆ ವೈದ್ಯರು, ವಾರಕ್ಕೆ ಒಂದು ಬಾರಿ ಬಂದು ಹೋಗುತ್ತಿದ್ದು, ರೋಗಿಗಳು ಪರದಾಡುವಂತಾಗಿದೆ. ಸಮಸ್ಯೆ ಸರಿಪಡಿಸಬೇಕು ಎಂದು ತಿಳಿಸಿದರು.
ಮೇಲಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಆಸ್ಪತ್ರೆಯ ಸಹ ಸಿಬ್ಬಂದಿ ಕೂಡ ಸರಿಯಾದ ಸಮಯಕ್ಕೆ ಬಂದು ಕೆಲಸ ನಿರ್ವಹಿಸುತ್ತಿಲ್ಲ. ಇದರಿಂದ ರೋಗಿಗಳು ಬಹಳ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಆರೋಪಿದರು.
ಸಂಘದ ಕಾರ್ಯದರ್ಶಿಯಾದ ಭೀಮಣ್ಣ ಕಣಜೆ ಮಾತನಾಡಿ, ಸಮುದಾಯ ಆಸ್ಪತ್ರೆಗೆ ಪೂರ್ಣ ಪ್ರಮಾಣದ ವೈದ್ಯ ಅಧಿಕಾರಿಗಳನ್ನು ನೇಮಕ ಮಾಡಬೇಕು. ಜತೆಗೆ ಮಕ್ಕಳು, ಸ್ತ್ರೀರೋಗ ತಜ್ಞರ ಕೊರತೆ ಇದ್ದು, ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ತಾಲೂಕು ರೈತ ಸಂಘದ ಕಾರ್ಯದರ್ಶಿಗಳಾದ ಭೀಮಣ್ಣ ಕಣಜಿ, ಪ್ರಶಾಂತ ಎಂ. ಖಾನಾಪುರೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.