ಹುಮನಾಬಾದ್: ತಾಲ್ಲೂಕಿನಲ್ಲಿ ವಿಪರೀತ ಮಳೆ ಸುರಿದಿರುವ ಕಾರಣ ರೈತರ ಬೆಳೆ ಬಹುತೇಕ ಹಾಳಾಗಿದೆ ಎಂದು ಶಾಸಕ ರಾಜಶೇಖರ ಪಾಟೀಲ ತಿಳಿಸಿದರು.
ಪಟ್ಟಣದ ತಹಶೀಲ್ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾಧಿಕಾರಿಗಳ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದರು.
ಅನೇಕ ರೈತರು ಬೆಳೆ ಕಳೆದುಕೊಂಡು ಅತಂತ್ರರಾಗಿದ್ದಾರೆ. ಅನೇಕರಿಗೆ ಇನ್ನೂ ಬೆಳೆವಿಮೆ ಹಣ ಬಂದಿಲ್ಲ. ಅಲ್ಲದೆ, ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದ ಕೆಲ ರಾಸಾಯನಿಕ ಕಾರ್ಖಾನೆಗಳು ನಿರಂತರವಾಗಿ ವಿಷಪೂರಿತ ತ್ಯಾಜ್ಯವನ್ನು ತಂದು ಪಟ್ಟಣ ಸೇರಿ ತಾಲ್ಲೂಕಿನ ಮಾಣಿಕ್, ಗಡವಂತಿ, ಬಸಂತಪುರ್, ಮೋಳಕೇರಾ ಹಾಗೂ ಹುಡಗಿ ಗ್ರಾಮಗಳ ಹಳ್ಳಕ್ಕೆ ಹರಿಬಿಡುತ್ತಿದ್ದಾರೆ ಎಂದು ಹೇಳಿದರು.
ಇದು ಈ ಗ್ರಾಮಗಳ ಜನ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ತಕ್ಷಣ ಈ ಕಾರ್ಖಾನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ಜಿಲ್ಲಾಧಿಕಾರಿ ಡಾ.ಗೋವಿಂದ ರೆಡ್ಡಿ, ಬಸವಕಲ್ಯಾಣ ಉಪವಿಭಾಗಾಧಿಕಾರಿ ರಮೇಶ, ತಹಶೀಲ್ದಾರ್ ಡಾ.ಪ್ರದೀಪಕುಮಾರ್ ಹಿರೇಮಠ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರುಗೇಪ್ಪ ವಸ್ತ್ರದ್, ಡಾ.ಗೋವಿಂದ್ , ಸಹಾಯಕ ನಿರ್ದೇಶಕ ಗೌತಮ್, ಪುರಸಭೆ ಮುಖ್ಯಾಧಿಕಾರಿ ಶಿವರಾಜ ರಾಠೋಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.