ಚಿಟಗುಪ್ಪ: ಲಾಕ್ಡೌನ್ ಮೂರನೇ ದಿನ ಬುಧವಾರ ತಾಲ್ಲೂಕಿನ ಚಾಂಗಲೇರಾ ಗ್ರಾಮದ ಹೊರ ವಲಯದಲ್ಲಿ ಸ್ಥಾಪಿಸಲಾದ ಚೆಕ್ಪೋಸ್ಟ್ನಲ್ಲಿ ವಾಹನಗಳು ತಡೆಯುವ ಕಾರ್ಯಕ್ಕೆ ತಹಶೀಲ್ದಾರ್ ಜಿಯಾವುಲ್ಲ ಚಾಲನೆ ನೀಡಿದರು.
‘ನಿತ್ಯ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ತಡೆಯಲು ಸರ್ಕಾರ ಕೈಗೊಂಡಿರುವ ಜಾರಿಗೊಳಿಸಿರುವ ಲಾಕ್ಡೌನ್ ಕಾರ್ಯ ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕಾಗಿರುವುದು ಎಲ್ಲ ನಾಗರಿಕರ, ಸರ್ಕಾರಿ ಅಧಿಕಾರಿಗಳ ಕರ್ತವ್ಯವಾಗಿದೆ. ಎಲ್ಲರೂ ಜವಾಬ್ದಾರಿ ಅರಿತು ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ’ ಎಂದು ಅವರು ಹೇಳಿದರು.
‘ಚೆಕ್ಪೋಸ್ಟ್ನಲ್ಲಿ ಕಲಬುರ್ಗಿ ಜಿಲ್ಲೆಯ ಚಿಂಚೋಳಿ, ಚಿಮ್ಮನಚೋಡ್, ಸೇಡಂ ಹಾಗೂ ತೆಲಂಗಾಣ ರಾಜ್ಯದಿಂದ ಜಿಲ್ಲೆಗೆ ಬರುವ ಪ್ರಯಾಣಿಕರ ವಾಹನಗಳನ್ನು ಚೆಕ್ಪೋಸ್ಟ್ನಲ್ಲಿ ತಡೆದು ಮರಳಿ ಕಳಿಸಬೇಕು’ ಎಂದರು.
‘ಚೆಕ್ಪೋಸ್ಟ್ನಲ್ಲಿ ಪೊಲೀಸರು ದ್ವಿಚಕ್ರ ವಾಹನ ಸೇರಿದಂತೆ ಸಂಚರಿಸುವ ಎಲ್ಲ ರೀತಿಯ ವಾಹನಗಳನ್ನು ತಡೆಯುತ್ತಿರುವುದರಿಂದ ತಾಲ್ಲೂಕಿನೆಲ್ಲೆಡೆ ಜನದಟ್ಟಣೆ ಕಡಿಮೆಯಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ಕನಕ ಹೇಳಿದರು.
‘ಗ್ರಾಮೀಣ ಭಾಗದಲ್ಲಿ ಕಿರಾಣಿ ಅಂಗಡಿ ವ್ಯಾಪಾರಿಗಳು ಬೆಳಿಗ್ಗೆ 10 ಗಂಟೆ ನಂತರ ವಹಿವಾಟು ನಿಲ್ಲಿಸಿ ಅಂಗಡಿ ಮುಚ್ಚಿ ಲಾಕ್ಡೌನ್ಗೆ ಸಹಕರಿಸಬೇಕು’ ಎಂದು ವೃತ್ತ ನಿರೀಕ್ಷಕ ಅಮೂಲ್ ಕಾಳೆ ಸೂಚಿಸಿದರು.
ಬೇಮಳಖೇಡಾ ಪೊಲೀಸ್ ಠಾಣೆ ಸಿಬ್ಬಂದಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.