ADVERTISEMENT

ಜನವಾಡ: 10 ವರ್ಷಗಳಿಂದಲೂ ಇಲ್ಲ ಬಸ್‌ ಸೌಕರ್ಯ!

ಅಲ್ಮಾಸಪುರ ಗ್ರಾಮಸ್ಥರಿಗೆ ಕ್ರಾಸ್‌ವರೆಗೆ ನಡೆದುಕೊಂಡು ಹೋಗುವುದು ಅನಿವಾರ್ಯ

ನಾಗೇಶ ಪ್ರಭಾ
Published 16 ಅಕ್ಟೋಬರ್ 2025, 7:26 IST
Last Updated 16 ಅಕ್ಟೋಬರ್ 2025, 7:26 IST
ಬಸ್ ಸೌಕರ್ಯ ಇಲ್ಲದ ಕಾರಣ ಪ್ರಯಾಣಿಕರು ಅಲ್ಮಾಸಪುರದಿಂದ ಅಲ್ಮಾಸಪುರ ಕ್ರಾಸ್‍ಗೆ ನಡೆದುಕೊಂಡು ಬರುತ್ತಿರುವುದು
ಬಸ್ ಸೌಕರ್ಯ ಇಲ್ಲದ ಕಾರಣ ಪ್ರಯಾಣಿಕರು ಅಲ್ಮಾಸಪುರದಿಂದ ಅಲ್ಮಾಸಪುರ ಕ್ರಾಸ್‍ಗೆ ನಡೆದುಕೊಂಡು ಬರುತ್ತಿರುವುದು   

ಜನವಾಡ: ಗಡಿಗ್ರಾಮ ಅಲ್ಮಾಸಪುರಕ್ಕೆ ಸುಮಾರು 10 ವರ್ಷಗಳಿಂದ ಬಸ್‌ ಸೌಕರ್ಯ ಇಲ್ಲ. ಹೀಗಾಗಿ ಗ್ರಾಮಸ್ಥರಿಗೆ ನಡಿಗೆ ಅನಿವಾರ್ಯವಾಗಿದೆ. ಬಸ್‌ ಓಡಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಂದ ಹಿಡಿದು ಜನಪ್ರತಿನಿಧಿಗಳವರೆಗೂ ಮನವಿ ಸಲ್ಲಿಸಿದರೂ ಬಸ್‌ ಮಾತ್ರ ಗ್ರಾಮಕ್ಕೆ ಬರಲಿಲ್ಲ. 

ಬೀದರ್ ತಾಲ್ಲೂಕಿನ ಅಲ್ಮಾಸಪುರ ಗ್ರಾಮಸ್ಥರು ಪ್ರಯಾಣಕ್ಕೆ ತೊಂದರೆ ಅನುಭವಿಸುವಂತಾಗಿದೆ.

ಗ್ರಾಮದಿಂದ ಎರಡು ಕಿ.ಮೀ ಅಂತರದಲ್ಲಿಯೇ ತೆಲಂಗಾಣ ಗಡಿ ಇದೆ. ಗ್ರಾಮಸ್ಥರು ಜಿಲ್ಲಾ ಕೇಂದ್ರ ಬೀದರ್ ಹಾಗೂ ಇತರೆಡೆ ಪ್ರಯಾಣ ಬೆಳೆಸಲು ಒಂದು ಕಿ.ಮೀ ದೂರದ ಅಲ್ಮಾಸಪುರ ಕ್ರಾಸ್‌ವರೆಗೆ ನಡೆದುಕೊಂಡೇ ಹೋಗಬೇಕಾಗಿದೆ. ವೃದ್ಧರು ಹಾಗೂ ಅಂಗವಿಕಲರಿಗೆ ಪ್ರಯಾಣ ಹೆಚ್ಚು ತ್ರಾಸದಾಯಕವಾಗಿದೆ.

ADVERTISEMENT

ಹಿಂದೆ ಗ್ರಾಮಕ್ಕೆ ಸಾರಿಗೆ ಸಂಸ್ಥೆಯ ಬಸ್‍ಗಳು ಬರುತ್ತಿದ್ದವು. ದಶಕದ ಹಿಂದೆ ಸಂಚಾರ ಸ್ಥಗಿತಗೊಳಿಸಿದ ಬಸ್‍ಗಳು ಈವರೆಗೂ ಮತ್ತೆ ಗ್ರಾಮದತ್ತ ಮುಖ ಮಾಡಿಲ್ಲ ಎಂದು ತಿಳಿಸುತ್ತಾರೆ ಗ್ರಾಮದ ಬಾಲಕಿಶನ್ ಅನುವಲೆ.

ಹುಮನಾಬಾದ್ ಹಾಗೂ ಬೀದರ್ ಡಿಪೊದ ಬಸ್‍ಗಳು ಗ್ರಾಮದ ಮೂಲಕ ಸಂಚರಿಸುತ್ತಿದ್ದವು. ಆಗ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ಅನುಕೂಲವಿತ್ತು. ಅವು ಸಂಚಾರ ನಿಲ್ಲಿಸಿದ ನಂತರ ಬೀದರ್‌ಗೆ ಹೋಗಲು ಹಾಗೂ ಅಲ್ಲಿಂದ ಗ್ರಾಮಕ್ಕೆ ಮರಳಲು ಕ್ರಾಸ್ ವರೆಗೆ ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾಗಿದೆ. ತೆಲಂಗಾಣ ಸಾರಿಗೆ ಸಂಸ್ಥೆಯ ಬಸ್ ನಿಜಾಮಾಬಾದ್‍ನಿಂದ ಗ್ರಾಮದ ಮಾರ್ಗವಾಗಿ ನಿತ್ಯ ಒಮ್ಮೆ ಬೀದರ್‌ಗೆ ಹೋಗಿ ಬರುತ್ತದೆ. ಆದರೆ, ಶಾಲಾ–ಕಾಲೇಜು ವಿದ್ಯಾರ್ಥಿಗಳು, ನೌಕರಿಗೆ ಹೋಗುವವರಿಗೆ ಬಸ್ ಸಮಯ ಅನುಕೂಲಕರವಾಗಿಲ್ಲ ಎಂದು ಹೇಳುತ್ತಾರೆ.

ಬೀದರ್‌ಗೆ ತೆರಳಲು ಅಲ್ಮಾಸಪುರ ಕ್ರಾಸ್ ಬಳಿ ಬೀದರ್-ಜಾಂಪಾಡ್ ಬಸ್‍ಗಾಗಿ ಕಾಯಬೇಕಾಗುತ್ತದೆ. ಆ ಬಸ್ ಮಿಸ್ ಆದರೆ ದುಬಾರಿ ಹಣ ಕೊಟ್ಟು ಆಟೊ, ಟಂ ಟಂಗಳಲ್ಲಿ ತೆರಳಬೇಕಾಗುತ್ತದೆ. ಬಸ್ ಟಿಕೆಟ್ ದರ ₹15 ಆಗಿದ್ದರೆ, ಖಾಸಗಿ ವಾಹನಗಳಿಗೆ ₹30 ಕೊಡಬೇಕಾಗುತ್ತದೆ ಎಂದು ತಿಳಿಸುತ್ತಾರೆ ಸಂಗಾರೆಡ್ಡಿ ದೇಗಲವಾಡಿ.

ರಸ್ತೆ ಉತ್ತಮವಾಗಿದ್ದರೂ ಬೀದರ್-ಜಾಂಪಾಡ್ ಬಸ್ ವಯಾ ಅಲ್ಮಾಸಪುರದ ಮೂಲಕ ಓಡಿಸಬೇಕು ಎಂಬ ಗ್ರಾಮಸ್ಥರ ಬೇಡಿಕೆಗೆ ಸ್ಪಂದನೆ ದೊರೆಯುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಗ್ರಾಮದ ಕಲ್ಲಪ್ಪ ಪೊಲೀಸ್ ಪಾಟೀಲ, ಶರಣಪ್ಪ ಪಾಟೀಲ, ಯೇಶಪ್ಪ ಹಾಗೂ ಪುಂಡಲೀಕ.

ಬಾಲಕಿಶನ್ ಅನುವಲೆ
ಗ್ರಾಮಸ್ಥರ ಪ್ರಯಾಣ ಸಮಸ್ಯೆ ಪರಿಹಾರಕ್ಕೆ ಬೀದರ್‌ನಿಂದ ಸಿಟಿ ಬಸ್ ಓಡಿಸಬೇಕು. ಇಲ್ಲವೆ ಬೀದರ್-ಜಾಂಪಾಡ್ ಬಸ್ ವಾಯಾ ಅಲ್ಮಾಸಪುರದ ಮೂಲಕ ಓಡಿಸಬೇಕು
ಬಾಲಕಿಶನ್ ಅನುವಲೆ ಗ್ರಾಮಸ್ಥ
ಶರಣಪ್ಪ ಪಾಟೀಲ
ಗ್ರಾಮಸ್ಥರ ಅನುಕೂಲದೊಂದಿಗೆ ಸಾರಿಗೆ ಸಂಸ್ಥೆಗೆ ಆದಾಯ ದೊರೆಯಲು ಬೀದರ್‌ನಿಂದ ತೆಲಂಗಾಣದ ಚಾಳಕಿಗೆ ಬಸ್ ಓಡಿಸಲು ಕ್ರಮ ಕೈಗೊಳ್ಳಬೇಕು
ಶರಣಪ್ಪ ಪಾಟೀಲ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.