ಶಿವಾನಂದ ಸ್ವಾಮೀಜಿ
ಹುಲಸೂರ: ‘ಬಸವ ಸಂಸ್ಕೃತಿ ಅಭಿಯಾನ ಹಾಗೂ ಬಸವ ತತ್ವದ ಸ್ವಾಮೀಜಿಗಳ ಕುರಿತ ಕನ್ಹೇರಿಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆ ಖಂಡನೀಯ’ ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಹೇಳಿದರು.
ಪತ್ರಿಕೆಯ ಜೊತೆ ಮಾತನಾಡಿದ ಅವರು,‘ಸಿದ್ದೇಶ್ವರ ಸ್ವಾಮಿಜಿ ಅವರ ಶಿಷ್ಯರಾಗಿ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಲಾರದೆ ಅತ್ಯಂತ ಕೀಳುಮಟ್ಟದ ಗುಣಗಳನ್ನು ಅಳವಡಿಸಿಕೊಂಡು ಭ್ರಾಂತಿಯಿಂದ ಮನಸ್ಸಿಗೆ ಬಂದಂತೆ ಮಾತನಾಡುವ ಅವರು ನಿಜವಾದ ಸ್ವಾಮೀಜಿಯಲ್ಲ. ಅವರ ಹೇಳಿಕೆ ಅವಿವೇಕದ ಪರಮಾವಧಿ’ ಎಂದರು.
‘ಬುದ್ಧಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲಾರದೆ ಎಲುಬಿಲ್ಲದ ನಾಲಿಗೆಯಿಂದ ಲಿಂಗಾಯತ ಮಠಗಳ ಒಕ್ಕೂಟದ ಸ್ವಾಮೀಜಿಗ ಳನ್ನು ನಿಂದಿಸಿದ್ದಾರೆ. ವಿವೇಕದಿಂದ ಮಾತನಾಡಬೇಕು. ಕೆಟ್ಟ ಮಾತುಗಳನ್ನು ಹಾಡುವ ಮೂಲಕ ಸಣ್ಣತನ ಪ್ರದರ್ಶಿಸಬಾರದು’ ಎಂದು ಹೇಳಿದರು.
‘ನಮ್ಮನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೃಪಾಪೋಷಿತ ನಾಟಕ ಸಂಘದವರು ಎಂದು ಆ ಸ್ವಾಮೀಜಿ ಕರೆದಿದ್ದಾನೆ. ನಾವು ಯಾವ ಕೃಪಾಪೋಷಿತ ನಾಟಕ ಸಂಘದವರೂ ಅಲ್ಲ. ಆ ಸ್ವಾಮೀಜಿಗೆ ಕಾಮಾಲೆಯಾಗಿದೆ. ತಲೆಯಲ್ಲಿ ವಿಚಾರಗಳಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನಾವು ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಮಂದಿರಗಳಿಗೆ ಹೋಗಬೇಡಿ ಎಂದು ಯಾರಿಗೂ ಹೇಳಿಲ್ಲ. ಅವರು ತಮ್ಮ ಎಲುಬಿಲ್ಲದ ನಾಲಗೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ತಕ್ಕ ಪಾಠ ಕಲಿಸುವುದು ಹೇಗೆ ಎಂದು ಲಿಂಗಾಯತ ಮಠಾಧೀಶರಿಗೆ ಗೊತ್ತು’ ಎಂದು ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.