ಬೀದರ್: ‘ಕನ್ನಡವನ್ನು ಕೂಡಿಸುವ ಕೆಲಸವಾಗಬೇಕೆ ವಿನಃ ವಿಭಜಿಸುವುದಲ್ಲ’ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಹೇಳಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಕನ್ನಡಕ್ಕೆ ಗೌರವ ಮತ್ತು ಗರ್ವ ಎರಡೂ ಸಿಕ್ಕಾಗ ಕನ್ನಡದ ಬಗ್ಗೆ ಸಹಜವಾಗಿಯೇ ಆತ್ಮಾಭಿಮಾನ ಜಾಗೃತವಾಗುತ್ತದೆ. ವಿದ್ಯಾರ್ಥಿಗಳು ಮಾತಿಗೆ ಮತ್ತು ಹೆಸರಿಗೆ ಕನ್ನಡ ಅಭಿಮಾನ ತೋರದೆ ನಿಜವಾಗಿಯೂ ಕನ್ನಡ ನಾಡು ನುಡಿ, ಪ್ರದೇಶದ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರು ಕನ್ನಡವೆಂಬ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನ ನ.1. ಇಂತಹದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ನಾವೆಲ್ಲರೂ ಗೌರವದಿಂದ ಸ್ಮರಿಸಬೇಕಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಹಂಗರಗಿ, ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ, ನ್ಯಾಸ ಕಾರ್ಯದರ್ಶಿ ಮಡಿವಾಳಪ್ಪಾ ಗಂಗಶೆಟ್ಟಿ, ಸಂಸ್ಥೆಯ ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ಆಡಳಿತ ಮಂಡಳಿಯ ಸದಸ್ಯರಾದ ಮಹೇಶಕುಮಾರ ಭದಭದೆ, ಶಾಂತಕುಮಾರ ಚಂದಾ, ವೀರಭದ್ರಪ್ಪಾ ಭುಯ್ಯಾ, ಶಿವಾನಂದ ಗಾದಗೆ, ಶ್ರೀನಾಥ ನಾಗೂರೆ, ಆಡಳಿತ ಅಧಿಕಾರಿ ಪ್ರೊ.ಎಚ್.ಎಸ್.ಪಾಟೀಲ, ಉಪಪ್ರಾಚಾರ್ಯ ಪ್ರೊ.ಅನಿಲಕುಮಾರ ಚಿಕ್ಕಮಣ್ಣೂರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.