ಬೀದರ್: ‘ಕನ್ನಡ ನಾಡು ಸಾಂಸ್ಕೃತಿಕ ನೆಲೆವೀಡಾಗಿದೆ. ವಿದೇಶಿಯರು ಕೂಡ ಕನ್ನಡ ಸಂಸ್ಕೃತಿಗೆ ಮಾರುಹೋಗಿದ್ದಾರೆ. ಆದ್ದರಿಂದ ಪ್ರತಿಯೊಬ್ಬರಿಗೂ ಕನ್ನಡದ ಬಗ್ಗೆ ಅಭಿಮಾನವಿರಬೇಕು’ ಎಂದು ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಅಭಿಪ್ರಾಯಪಟ್ಟರು.
ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಸಮೀಪದ ಮಹಾಲಕ್ಷ್ಮೀ ಸಭಾಂಗಣದಲ್ಲಿ ಕದಂಬ ಕನ್ನಡ ಸಂಘದಿಂದ ಕುವೆಂಪು ಅವರ ಜನ್ಮ ದಿನದ ಪ್ರಯುಕ್ತ ಆಯೋಜಿಸಿದ್ದ ಸಾಹಿತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಪಾಲಕರು ಮಕ್ಕಳೊಂದಿಗೆ ಕನ್ನಡದಲ್ಲಿಯೇ ಮಾತನಾಡಬೇಕು. ಇದರಿಂದ ಮಕ್ಕಳಲ್ಲಿ ಸ್ವಾಭಿಮಾನದೊಂದಿಗೆ ಸಂಸ್ಕೃತಿಯನ್ನು ಬೆಳೆಸಲು ಸಹಕಾರಿಯಾಗುವುದು’ ಎಂದು ತಿಳಿಸಿದರು.
ಉಪನ್ಯಾಸಕ ರಾಮಚಂದ್ರ ಗಣಾಪೂರ ಮಾತನಾಡಿ,‘ ಕುವೆಂಪು ಅವರ ಎಲ್ಲ ಕೃತಿಗಳಲ್ಲಿ ವೈಚಾರಿಕತೆ ಹಾಸುಹೊಕ್ಕಿದೆ ಅಲ್ಲದೇ ಅವರು ಜೀವನದಲ್ಲಿಯೂ ವೈಚಾರಿಕ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು’ ಎಂದು ಹೇಳಿದರು.
ಕರ್ನಾಟಕ ಕಾಲೇಜು ಉಪನ್ಯಾಸಕಿ ಮಹಾನಂದಾ ಮಡಕಿ ಮಾತನಾಡಿ,‘ಕುವೆಂಪು ಸಮಾಜದಲ್ಲಿ ರೂಢಿಯಲ್ಲಿದ್ದ ಮೂಢ ನಂಬಿಕೆಗಳನ್ನು ಹೋಗಲಾಡಿಸುವ ಕೃತಿಗಳನ್ನು ರಚಿಸಿದ್ದಾರೆ’ ಎಂದು ತಿಳಿಸಿದರು.
ಕದಂಬ ಕನ್ನಡ ಸಂಘದ ಅಧ್ಯಕ್ಷ ವೀರಶೆಟ್ಟಿ ಮೈಲೂರಕರ್ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸಿದ್ದರು.ಸಾಹಿತಿ ಎಂ.ಜಿ.ಗಂಗನಪಳ್ಳಿ, ಭಾರತಿ ವಸ್ತ್ರದ, ಕೆ.ಗುರುಮೂರ್ತಿ,ಶಾಮರಾವ್ ನೆಲವಾಡೆ, ಆರ್ಎಸ್ ಭೂರೆ,ರಾಜಶೇಖರ ಮಂಗಲಗಿ, ಶೈಲಜಾ ಹುಡಗೆ, ಗಂಗಶೆಟ್ಟಿ ಖಾನಾಪೂರೆ, ಅನಿಲಕುಮಾರ ದೇಶಮುಖ, ರಮೇಶ ಬಿರಾದಾರ, ಶಾಂತಲಾ ಮೈಲೂರಕರ್, ಲಕ್ಷ್ಮಿಕಾಂತ ವಲ್ಲೆಪೂರೆ, ಗುಂಡಪ್ಪ ಹುಡಗೆ, ಬಿ.ಎಂ.ಬಿರಾದಾರ, ಪ್ರಭು ಪಾಟೀಲ, ನೀಲಕಂಠ ಬಿರಾದರ, ಸ್ವರೂಪರಾಣಿ ಹಾಗೂ ಸ್ವಾತಿ ಸಂತೋಷ ಇದ್ದರು.
ಕೆ.ಸತ್ಯಮೂರ್ತಿ ಸ್ವಾಗತಿಸಿದರು. ಬಸವರಾಜ ಮೂಲಗೆ ನಿರೂಪಿಸಿದರು. ಬಸಯ್ಯ ಸ್ವಾಮಿ
ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.