
ಔರಾದ್: ‘ಮಕ್ಕಳಲ್ಲಿ ನಾಡು-ನುಡಿ ಅಭಿಮಾನ ಬೆಳೆಸುವುದು ಅಗತ್ಯವಿದೆ’ ಎಂದು ಹಿರಿಯ ಮುಖಂಡ ಶಿವರಾಜ ಅಲ್ಮಾಜೆ ಹೇಳಿದರು.
ಫೆಬ್ರುವರಿ 4ರಂದು ನಡೆಯಲಿರುವ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ಇಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
‘ಕನ್ನಡ ಜಗತ್ತಿನ ಅತ್ಯಂತ ಶ್ರೇಷ್ಠ ಭಾಷೆ. ಇಂಗ್ಲಿಷ್ ವ್ಯಾಮೋಹದಲ್ಲಿ ನಾವು ಇದನ್ನು ಮರೆತು ಬಿಡುತ್ತಿದ್ದೇವೆ. ಹೀಗಾಗಬಾರದು. ನಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಕಲಿಸಬೇಕು. ಇದರಿಂದ ಅವರ ಭವಿಷ್ಯ ಉಜ್ವಲವಾಗುತ್ತದೆ’ ಎಂದರು.
ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿ ‘ಮಕ್ಕಳಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ನಮ್ಮ ನೆಲ ಮೂಲ ಸಂಸ್ಕೃತಿ ನಾವು ವಾಸಿಸುವ ಪ್ರದೇಶದ ಹಿರಿಮೆ ಹಾಗೂ ಅದರ ಇತಿಹಾಸ ಅರಿಯಬೇಕು’ ಎಂದರು.
ಕಸಾಪ ತಾಲ್ಲೂಕು ಸಂಚಾಲಕ ಅಶೋಕ ಶೆಂಬೆಳ್ಳಿ ‘ಆಂಗ್ಲ ವ್ಯಾಮೋಹಕ್ಕೆ ಒಳಗಾಗಿ ಕನ್ನಡದ ಸಂಸ್ಕೃತಿಯಿಂದ ವಂಚಿತರಾಗುತ್ತಿರುವ ಮಕ್ಕಳಿಗೆ ಕನ್ನಡದ ಕಡೆಗೆ ತರುವ ಅವಶ್ಯಕತೆ ಹಿಂದಿಗಿಂತ ಈಗ ಹೆಚ್ಚಾಗಿದೆ’ ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ 370, ಭಾಷಣ ಸ್ಪರ್ಧೆಯಲ್ಲಿ 134, ಗಾಯನ ಸ್ಪರ್ಧೆಯಲ್ಲಿ 80 ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಿದರು.
ಪ್ರಾಂಶುಪಾಲ ರೇವಣಯ್ಯ ಮಠ, ಪ್ರೇಮಾ ಹೂಗಾರ, ಜಗನ್ನಾಥ ಮೂಲಗೆ, ಶಾಲಿವಾನ ಉದಗಿರೆ, ಸಂಜೀವ ಶೆಟಕಾರ, ರಾಜಕುಮಾರ ಡೊಂಗ್ರೆ, ಮಾರುತಿ ಗಾದಗೆ, ಯಶವಂತರಾವ ಡೊಂಬಾಳೆ, ಅನಿಲಕುಮಾರ ಕಟ್ಟೆ, ಸತೀಶ ಮಜಗೆ, ವಿಜಯಕುಮಾರ ಮೂಲಗೆ, ಆನಂದ ದ್ಯಾಡೆ, ಶಾಂತಾ ಬುಕ್ಕಾ, ಅನಿತಾ ಕೋಟೆ, ಅಂಬಾದಾಸ ನೆಳಗೆ, ಮಹಾದೇವ ಸಿಂಧೆ, ಅನಿಲ ಮೇತ್ರೆ, ಮಲ್ಲಿಕಾರ್ಜುನ ಟೆಕರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.