ಖಟಕಚಿಂಚೋಳಿ: ಹೋಬಳಿಯ ಚಳಕಾಪುರ, ಮಾಸಿಮಾಡ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಭಾನುವಾರ ಕಾರಹುಣ್ಣಿಮೆ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ರಾಸುಗಳನ್ನು ಸಿಂಗರಿಸಿದ ರೈತರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕೈಗೊಂಡರು. ಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲಿ ತಿಂಡಿ ತಿನಿಸು ಸಿದ್ಧಪಡಿಸಲಾಗಿತ್ತು. ಬೆಳಿಗ್ಗೆಯಿಂದ ರಾಸುಗಳ ಅಲಂಕಾರ, ಮನೆ ಸ್ವಚ್ಛತೆ, ಕೃಷಿ ಪರಿಕರಗಳ ವಿಶೇಷ ಪೂಜೆ, ಎತ್ತಿನ ಗಾಡಿ ಓಟ ನಡೆಯಿತು.
ರೈತರು ಶನಿವಾರ ರಾತ್ರಿಯೇ ಹೊನ್ನುಹುಗ್ಗಿ ಕುಟ್ಟಿ, ವಿಶೇಷವಾಗಿ ಸಿಹಿ ಚಟ್ನಿ ತಯಾರಿಸಿ ರಾಸುಗಳಿಗೆ ನೀಡಿದರು. ಬೆಳಿಗ್ಗೆ ಮಹಿಳೆಯರು ಮನೆ ಸ್ವಚ್ಛಗೊಳಿಸಿದರು. ರೈತರು ಎತ್ತುಗಳ ಕೊಂಬಿಗೆ ಬಣ್ಣ ಬಳಿದರು. ಹೊಸ ದಾರದಿಂದ ತಯಾರಿಸಿದ ಮೊಗರಾಣಿ, ಗೊಂಡೆ, ಟೊಂಕದ ದಾರವನ್ನು ಎತ್ತುಗಳಿಗೆ ಹಾಕಿ ಅಲಂಕರಿಸಿ ಸಂತಸಪಟ್ಟರು. ಕೊರಳಲ್ಲಿ ಗೆಜ್ಜೆ ಸರ ಹಾಗೂ ವಿವಿಧ ರೀತಿಯ ಅಲಂಕಾರಿಕ ವಸ್ತುಗಳನ್ನು ಹಾಕಿದರು. ಕೃಷಿ ಚಟುವಟಿಕೆಯ ಕೂರಿಗೆ, ಕುಂಟಿ, ಬುಕ್ಕಾ ಹಗ್ಗ, ಮಂಡಿ, ನೊಗ ಸೇರಿದಂತೆ ಇನ್ನಿತರ ಎಲ್ಲ ಸಾಮಾಗ್ರಿಗಳನ್ನು ಪೂಜೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.