ಬೀದರ್: ‘ಗೋದಾವರಿ ಜಲಾನಯನ ಪ್ರದೇಶದ ಕಾರಂಜಾ ನೀರಾವರಿ ಯೋಜನೆಗೆ ಭೂಮಿ ನೀಡಿದ ಸಂತ್ರಸ್ತ ರೈತರಿಗೆ ಹೊಸ ವರ್ಷಕ್ಕೆ ಪರಿಹಾರ ನೀಡಬೇಕು’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದರು.
ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಕಾಲಮಿತಿಯಲ್ಲಿ ಪರಿಹಾರ ಹಣ ಬಿಡುಗಡೆಗೆ ಸರ್ಕಾರ ಕ್ರಮ ಜರುಗಿಸಬೇಕೆಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಿದ್ಧರಾಮಯ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಸಚಿವ ರಹೀಂ ಖಾನ್ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ರಾಜಕೀಯ ಇಚ್ಛಾಶಕ್ತಿ ತೋರಿಸಿ, ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸಲು ಕಾಳಜಿ ವಹಿಸಬೇಕೆಂದು ಆಗ್ರಹಿಸಿದರು.
1978–79, 1985–86ರಲ್ಲಿ ರೈತರು ತಮ್ಮ ಜಮೀನು ನೀಡಿದ್ದಾರೆ. ರಾಜ್ಯ ಸರ್ಕಾರ ಇದೇ ಏಪ್ರಿಲ್ 7ರಂದು ತಾಂತ್ರಿಕ ಸಮಿತಿ ರಚಿಸಿತು. ಅನೇಕ ವ್ಯಾಜ್ಯಗಳಲ್ಲಿ ನ್ಯಾಯಾಲಯಗಳು ನೀಡಿರುವ ತೀರ್ಪಿನಂತೆ ಮಾನವೀಯ ಮಾನದಂಡ ಆಧರಿಸಿ ಪರಿಹಾರ ನೀಡಬೇಕು. ಸರ್ಕಾರ ಸಮಿತಿ ರಚಿಸಿ, ಎಂಟು ತಿಂಗಳಾಗುತ್ತ ಬಂದಿದೆ. ಸಮಿತಿ ಇದುವರೆಗೆ ವರದಿ ಸಲ್ಲಿಸಿಲ್ಲ. ಕಲಬುರಗಿ ಪ್ರಾದೇಶಿಕ ಆಯುಕ್ತರ ವರ್ಗಾವಣೆ ಆಗಿ ಹೊಸಬರು ಆ ಸ್ಥಾನಕ್ಕೆ ಬಂದಿದ್ದಾರೆ. ಸರ್ಕಾರ ಅವರಿಂದ ಡಿಸೆಂಬರ್ನೊಳಗೆ ವರದಿ ತರಿಸಿಕೊಂಡು, ಹೊಸ ವರ್ಷದಲ್ಲಿ ಪರಿಹಾರ ಘೋಷಿಸಬೇಕು ಎಂದು ಹಕ್ಕೊತ್ತಾಯ ಮಾಡಿದರು.
ಒಂದು ವೇಳೆ ಸರ್ಕಾರ ವಿಳಂಬ ನೀತಿ ಅನುಸರಿಸಿದರೆ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಮೂಲಕ ಹೋರಾಟದ ಹೆಜ್ಜೆ ಇಡಲಾಗುವುದು. ಸಿಎಂ, ಡಿಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದರು.
ಹೆಚ್ಚುವರಿಯಾಗಿ ಅಧಿಕೃತವಾಗಿ ಸ್ವಾಧೀನ ಮಾಡಿಕೊಂಡಿರುವ ಜಮೀನಿಗೆ ಏಕರೂಪ ದರ ನಿಗದಿಪಡಿಸಬೇಕು. ಈಗಾಗಲೇ ಸರ್ಕಾರ ಹೆಚ್ಚುವರಿ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಹಣ ಮಂಜೂರು ಮಾಡಿದರೂ ಸಹ ಇಲಾಖೆಯ ಅಧಿಕಾರಿಗಳು ಹಣ ಪಾವತಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಿತಿ ಗೌರವ ಅಧ್ಯಕ್ಷ ಡಾ.ಬಸವರಾಜ ದೇಶಮುಖ, ಸಾಹಿತಿ ಆರ್.ಕೆ. ಹುಡಗಿ, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ, ಹೋರಾಟಗಾರ ವಿನಯ್ ಕುಮಾರ್ ಮಾಳಗೆ, ಮಾಜಿದ್ ದಾಗಿ, ಅಸ್ಲಂ ಚೌಂಗೆ, ರಾಜಪ್ಪ ಕಮಲಾಪೂರೆ, ಡಾ. ರಾಜಶೇಖರ ರಂಜೋಳಖೇಣಿ, ರೋಹನಕುಮಾರ್, ಭೀಮರೆಡ್ಡಿ ಅವರಾದ, ಯೂಸೂಫ್ ರೇಕುಳಗಿ, ಮುಹಮ್ಮದ್ ಅಹಮ್ಮದ್ ಬಗದಲ್, ಮಾದಪ್ಪ ಸಂಗೋಳಗಿ, ಲಕ್ಷ್ಮೀ ಸಂಗೋಳಗಿ, ತೇಜಮ್ಮ ಹಿಲಾಲಪೂರ, ವಿದ್ಯಾವತಿ ಅವರಾದ ಹಾಜರಿದ್ದರು.
ಶಾಸಕ ರಾಜು ಕಾಗೆ ಉಚ್ಚಾಟನೆಗೆ ಆಗ್ರಹ
‘ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಉತ್ತರ ಕರ್ನಾಟಕದ 15 ಜಿಲ್ಲೆಗಳನ್ನು ಸೇರಿಸಿ, ಪ್ರತ್ಯೇಕ ರಾಜ್ಯವಾಗಿ ಘೋಷಿಸಬೇಕೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಬೇಡಿಕೆ ಇರಿಸಿರುವುದು ಖಂಡನಾರ್ಹ’ ಎಂದು ಲಕ್ಷ್ಮಣ ದಸ್ತಿ ಹೇಳಿದರು.
ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳು ವಿಶಾಲ ಕರ್ನಾಟಕದ ಭಾಗವಾಗಿವೆ. ಏಕೀಕರಣದ ನಂತರ 30 ವರ್ಷಗಳ ನಿರಂತರ ನಿರ್ಲಕ್ಷ್ಯದ ನಂತರ ಸರ್ಕಾರ 371 (ಜೆ) ಕಲಂ ಮೂಲಕ ವಿಶೇಷ ಸ್ಥಾನಮಾನ ಒದಗಿಸಿ ಈ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ. ಈ ಭಾಗದ ಜನರಿಗೆ ನೌಕರಿಗಳಲ್ಲಿ, ವೃತ್ತಿಪರ ಕೋರ್ಸ್ಗಳಲ್ಲಿ ಮೀಸಲಾತಿ ಸಿಗುತ್ತಿದೆ. ನಿಧಾನವಾಗಿಯಾದರೂ ಅಭಿವೃದ್ಧಿ ಕೆಲಸಗಳಾಗುತ್ತಿದೆ. ಇದರಿಂದ ಕಿತ್ತೂರು ಕರ್ನಾಟಕದ ಕೆಲ ಶಾಸಕರಿಗೆ ಹೊಟ್ಟೆಕಿಚ್ಚು. ಇದಕ್ಕಾಗಿ ಈ ರೀತಿಯ ಕುತಂತ್ರ ನಡೆಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಗೆ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.