ADVERTISEMENT

ಕಾರಂಜಾ ಸಂತ್ರಸ್ತರಿಗೆ ಪ್ಯಾಕೇಜ್‌ ಘೋಷಿಸಿ: ಲಕ್ಷ್ಮಣ ದಸ್ತಿ

ಸಿಎಂ ನೇತೃತ್ವದ ಸಭೆ ಕಾಟಾಚಾರಕ್ಕೆ ನಡೆಯದೆ ತಾರ್ಕಿಕ ಅಂತ್ಯ ಕಾಣಲಿ–ದಸ್ತಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 12:53 IST
Last Updated 14 ಡಿಸೆಂಬರ್ 2024, 12:53 IST
ಲಕ್ಷ್ಮಣ ದಸ್ತಿ
ಲಕ್ಷ್ಮಣ ದಸ್ತಿ   

ಬೀದರ್‌: ‘ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದುಕೊಂಡು ಸಂತ್ರಸ್ತರಾದ ರೈತರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಬೇಕು’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾನವೀಯ ಮಾನದಂಡದ ಮೇಲೆ ಕಲ್ಯಾಣ ಕರ್ನಾಟಕದ ಗಡಿ ಜಿಲ್ಲೆ ಬೀದರ್‌ನ ಸಂತ್ರಸ್ತ ರೈತರಿಗೆ ‘ಒನ್‌ ಟೈಮ್‌ ಸೆಟ್ಲಮೆಂಟ್‌’ ಮೂಲಕ ಪರಿಹಾರ ಘೋಷಿಸಬೇಕು’ ಎಂದು ಒತ್ತಾಯಿಸಿದರು.

‘ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದುಕೊಂಡ ರೈತರ ಪ್ರತಿ ಎಕರೆ ಜಮೀನಿಗೆ ಮಾರುಕಟ್ಟೆಯಲ್ಲಿ ಈಗ ₹30 ಲಕ್ಷ ಬೆಲೆ ಇದೆ. ಹಾಗಂತ ಅಷ್ಟು ಕೊಡಬೇಕೆಂದು ನಾವು ಕೇಳುತ್ತಿಲ್ಲ. ರೈತರಿಗೆ ಅನ್ಯಾಯವಾಗದಂತೆ ಪರಿಹಾರ ನೀಡಬೇಕು. 889 ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮನನೊಂದು ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದಾದ ಬಳಿಕ ಸಚಿವ ಈಶ್ವರ ಬಿ. ಖಂಡ್ರೆ ಅವರು ಆಸ್ಪತ್ರೆಗೆ ಭೇಟಿ ನೀಡಿ, ಧೈರ್ಯ ತುಂಬಿದ್ದಾರೆ. ಬಿಜೆಪಿ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ಸದನದಲ್ಲಿ ವಿಷಯ ಪ್ರಸ್ತಾಪಿಸಿರುವುದು ಸ್ವಾಗತಾರ್ಹ’ ಎಂದು ಹೇಳಿದರು.

ADVERTISEMENT

‘ಆದರೆ, ಈ ವಿಷಯ ಇಷ್ಟಕ್ಕೆ ಸೀಮಿತವಾಗಬಾರದು. ಡಿ.16ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕರೆದಿರುವ ಸಭೆ ಕಾಟಾಚಾರಕ್ಕೆ ನಡೆಯಬಾರದು. ಸಂತ್ರಸ್ತರ ಪರವಾಗಿ ನಿಯೋಗ ಹೋಗಿ, ಸಭೆಯಲ್ಲಿ ಭಾಗವಹಿಸುತ್ತೇವೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಖಂಡ್ರೆ ಹಾಗೂ ಜಿಲ್ಲೆಯ ಎಲ್ಲ ಶಾಸಕರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಸಭೆಯಲ್ಲಿ ಒಂದು ನಿರ್ಣಯ ಹೊರಬರಬೇಕು. ಸಮಸ್ಯೆಗೆ ಪೂರ್ಣ ವಿರಾಮ ಹಾಕಬೇಕು. ಮುಖ್ಯಮಂತ್ರಿ ಅಥವಾ ಡಿಸಿಎಂ ಧರಣಿ ಸ್ಥಳಕ್ಕೆ ಬಂದು ಧರಣಿ ಕೊನೆಗಾಣಿಸಬೇಕು’ ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡುವುದು ಜಿಲ್ಲೆಯ ಸಚಿವರು, ಶಾಸಕರ ಕರ್ತವ್ಯ. ನಾವು ಬಂದು ನಮ್ಮ ಗೋಳು ಹೇಳಿಕೊಳ್ಳುತ್ತೇವೆ. ಆದರೆ, ಅಂತಿಮವಾಗಿ ರಾಜಕೀಯ ಇಚ್ಛಾಶಕ್ತಿಯೇ ಮುಖ್ಯವಾದದ್ದು. ಈಗ ಸಾಂತ್ವನದ ಮಾತುಗಳು ಬೇಕಿಲ್ಲ. ರೈತರಿಗೆ ಸ್ಪಂದಿಸುವ ಕೆಲಸವಾಗಬೇಕು. ಈ ಹಿಂದೆಯೂ ಸಭೆ ನಡೆಸಲಾಗಿದೆ. ಮತ್ತೆ ಅದೇ ರೀತಿ ಆಗಬಾರದು’ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಮಾಡು ಅಥವಾ ಮಾಡಿ ಹೋರಾಟಕ್ಕೆ ಕಾರಂಜಾ ಸಂತ್ರಸ್ತರು ಬಂದು ನಿಂತಿದ್ದಾರೆ. 889 ದಿನಗಳಿಂದ ಧರಣಿ ನಡೆಯುತ್ತಿದೆ. ಧರಣಿಗೆ ಇತಿಶ್ರೀ ಹಾಡದೆ ಇರುವುದು ರಾಜಕೀಯ ಇಚ್ಛಾಶಕ್ತಿ ಕಾರಣ. ಸಂತ್ರಸ್ತ ರೈತರಿಗೆ ನ್ಯಾಯ ಕೊಡಿಸಲು ಜನಪ್ರತಿನಿಧಿಗಳು ಶ್ರಮಿಸುತ್ತಿಲ್ಲ. ಮತ್ತೆ ಕಾಟಾಚಾರಕ್ಕೆ ನಿಯೋಗದೊಂದಿಗೆ ಸಭೆ ನಡೆಸದೆ, ಇದಕ್ಕೆ ತಾರ್ಕಿಕ ಅಂತ್ಯ ಹಾಡಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರಕ್ಕೆ ಭಿಕ್ಷೆ ಕೇಳುತ್ತಿಲ್ಲ. ಕಾರಂಜಾ ಯೋಜನೆಗೆ ಜಮೀನು ಕೊಟ್ಟಿರುವುದಕ್ಕೆ ಪರಿಹಾರ ಕೇಳುತ್ತಿದ್ದೇವೆ. ಪರಿಹಾರ ಕೊಡದಿದ್ದರೆ ಬೀದರ್‌ ಬಂದ್‌ ಸೇರಿದಂತೆ ಇತರೆ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ಟೀಮ್‌ ಯುವ’ ಸಂಯೋಜಕ ವಿನಯ್‌ಕುಮಾರ್‌ ಮಾಳಗೆ, ರೈತ ಮುಖಂಡ ಕೇದಾರನಾಥ ಮತ್ತಿತರರು ಹಾಜರಿದ್ದರು.

ಮನನೊಂದು ರೈತರು ವಿಷ ಸೇವಿಸಿದ್ದಾರೆ. ಇದು ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ನಾಚಿಕೆಯ ವಿಷಯ.ಈಗಲಾದರೂ ರಾಜಕೀಯ ಇಚ್ಛಾಶಕ್ತಿ ತೋರಿಸಲಿ
ಸುರೇಶ ಚನಶೆಟ್ಟಿ ಜಿಲ್ಲಾಧ್ಯಕ್ಷ ಕಸಾಪ
ರೈತರಿಗೆ ನ್ಯಾಯ ಕೊಡಿಸಬೇಕೆಂಬ ಉದ್ದೇಶದಿಂದ ರೈತರು ವಿಷ ಸೇವಿಸಿ ಪ್ರಾಣ ಬಿಡಲು ಮುಂದಾಗಿದ್ದರು. ಆದರೆ ಅದೃಷ್ಟವಶಾತ್‌ ಬದುಕುಳಿದಿದ್ದಾರೆ.
ಲಕ್ಷ್ಮಣ ದಸ್ತಿ ಅಧ್ಯಕ್ಷ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.