ADVERTISEMENT

19ರಂದು ಮರಾಠಾ ನಿಗಮ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 5:07 IST
Last Updated 7 ಜುಲೈ 2022, 5:07 IST
ಬಸವಕಲ್ಯಾಣದಲ್ಲಿ ಬುಧವಾರ ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಜಿ.ಮುಳೆ ಅವರಿಗೆ ಮರಾಠಾ ಸಮಾಜದ ಮುಖಂಡರು ಮನವಿ ಸಲ್ಲಿಸಿದರು
ಬಸವಕಲ್ಯಾಣದಲ್ಲಿ ಬುಧವಾರ ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಜಿ.ಮುಳೆ ಅವರಿಗೆ ಮರಾಠಾ ಸಮಾಜದ ಮುಖಂಡರು ಮನವಿ ಸಲ್ಲಿಸಿದರು   

ಬಸವಕಲ್ಯಾಣ: ‘ಕರ್ನಾಟಕ ಮರಾಠಾ ಅಭಿವೃದ್ಧಿ ನಿಗಮ ವನ್ನು ಜುಲೈ 19ರಂದು ಅಧಿಕೃತವಾಗಿ ಉದ್ಘಾಟಿಸಲಾಗುತ್ತಿದೆ’ ಎಂದು ನಿಗಮದ ಅಧ್ಯಕ್ಷ ಎಂ.ಜಿ.ಮುಳೆ ಹೇಳಿದ್ದಾರೆ.

ನಗರದ ಆರ್ಯ ಸಮಾಜ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮರಾಠಾ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ನೆರವೆರಿಸಿ ಲಾಂಛನ ಬಿಡುಗಡೆ ಗೊಳಿಸುವರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆ ಯಲಿದ್ದು, ಮರಾಠಾ ಸಮುದಾಯದ ಅಭ್ಯುದಯಕ್ಕಾಗಿ ರಾಜ್ಯ ಸರ್ಕಾರ ಪ್ರಥಮವಾಗಿ ನಿಗಮ ಸ್ಥಾಪಿಸಿರುವ ಕಾರಣ ಸಮಾಜದವರು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಳ್ಳಬೇಕು’ ಎಂದರು.

ADVERTISEMENT

‘ಬಹಳಷ್ಟು ಕಷ್ಟಪಟ್ಟಿದ್ದರಿಂದ ನಿಗಮ ಸ್ಥಾಪನೆ ಆಗಿದೆ. ಸಮಾಜವನ್ನು 2 ಪ್ರವರ್ಗಕ್ಕೆ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆ ಇದುವರೆಗೂ ಈಡೇರಿಲ್ಲ. ಆದ್ದರಿಂದ ಈ ಬೇಡಿಕೆ ಹಾಗೂ ಇತರೆ ಸಮಸ್ಯೆ ಬಗೆಹರಿಸುವುದಕ್ಕಾಗಿ ಅಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತಿನ ಅಧ್ಯಕ್ಷ ವಿ.ಟಿ.ಶಿಂಧೆ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಜ್ಞಾನೇಶ್ವರ ಮುಳೆ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಾದೇವ ಹಸೂರೆ, ಭೀಮರಾವ್ ಶಿಂಧೆ, ಕಮಲಾಕರ ಪಾಟೀಲ, ಸತೀಶ ಮುಳೆ, ತಾತೇರಾವ ಪಾಟೀಲ, ಬಿಜೆಪಿ ಜಿಲ್ಲಾ ಮುಖಂಡ ಶಂಕರ ನಾಗದೆ, ಯುವರಾಜ ಪಾಟೀಲ, ಸೂರಜ್ ಪಾಟೀಲ, ವಿಜಯಕುಮಾರ ಉಕಾವಲೆ ಉಪಸ್ಥಿತರಿದ್ದರು.

ಮನವಿ ಸಲ್ಲಿಕೆ: ಈ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಮರಾಠಾ ಮಹಾಮಂಡಳದಿಂದ ನಿಗಮದ ಅಧ್ಯಕ್ಷ ಎಂ.ಜಿ.ಮುಳೆ ಅವರಿಗೆ ಮನವಿಪತ್ರ ಸಲ್ಲಿಸಿ ಗಡಿಯಲ್ಲಿನ ತಾಲ್ಲೂಕುಗಳಲ್ಲಿ ನಿಗಮದಿಂದ ಸಮಾಜದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಆರಂಭಿಸಲು ಒತ್ತಾಯಿಸಲಾಯಿತು.

ಮರಾಠಾ ಸಮುದಾಯದ ಸಾಹಿತಿಗಳಿಗೆ ನೆರವು ನೀಡುವುದಕ್ಕಾಗಿ ಮರಾಠಿ ಸಾಹಿತ್ಯ ಅಕಾಡೆಮಿ ಸ್ಥಾಪಿಸಬೇಕು. ಸಮುದಾಯಕ್ಕೆ 2 ಎ ಪ್ರವರ್ಗಕ್ಕೆ ಸೇರ್ಪಡೆಗಾಗಿ ಪ್ರಯತ್ನಿಸಬೇಕು ಎಂದು ಮನವಿ ಮಾಡಲಾಯಿತು.

ಮಂಡಳದ ಅಧ್ಯಕ್ಷ ಡಿ.ಜಿ.ಜಗತಾಪ, ಭೀಮರಾವ್, ದತ್ತುರಾವ್, ಭಾನುದಾಸ ಪಾಟೀಲ ಇದ್ದರು.

ಅನುದಾನ ಹೆಚ್ಚಳ: ಸಭೆ ನಂತರ ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಜಿ.ಮುಳೆ ಸುದ್ದಿಗಾರರೊಂದಿಗೆ ಮಾತನಾಡಿ, ‘ನಿಗಮದ ಅನುದಾನ ₹50 ಕೋಟಿ ಇತ್ತು. ಈಚೆಗೆ ಹೆಚ್ಚುವರಿಯಾಗಿ ₹10 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದರು.

‘ನಿಗಮದಿಂದ ಜೀಜಾವು ಜಲಭಾಗ್ಯ ಮತ್ತು ಶಹಾಜಿರಾಜೆ ಸಮೃದ್ಧಿ ಯೋಜನೆ ಆರಂಭಿಸಿ, ನೇರಸಾಲ ನೀಡಲಾಗುತ್ತಿದೆ. ಸಾಲ ಮತ್ತು ಅನುದಾನಕ್ಕೆ ರಿಯಾಯಿತಿ ನೀಡಲಾಗುತ್ತದೆ. ನಿಗಮದ ಉದ್ಘಾಟನೆಯ ನಂತರ ಅರ್ಜಿ ಆಹ್ವಾನಿಸಿ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ’ ಎಂದರು.

‘ರಾಜ್ಯದಲ್ಲಿ 40 ವಿಧಾನಸಭಾ ಕ್ಷೇತ್ರದಲ್ಲಿ ಮರಾಠಾ ಸಮುದಾಯದವರು ನಿರ್ಣಾಯಕ ಸಂಖ್ಯೆಯಲ್ಲಿ ಇದ್ದಾರೆ. ಆದ್ದರಿಂದ ಬಸವಕಲ್ಯಾಣ ಒಳಗೊಂಡು 15 ಕ್ಷೇತ್ರಗಳಲ್ಲಿ ಈ ಸಮುದಾಯದವರಿಗೆ ವಿಧಾನಸಭೆ ಟಿಕೆಟ್ ಕೊಡಲು ಆಗ್ರಹಿಸಲಾಗುತ್ತದೆ. ಪಕ್ಷ ನಿರ್ಧರಿಸಿದರೆ ನಾನೂ ಸ್ಪರ್ಧಿಸಲು ಸಿದ್ಧನಿದ್ದೇನೆ. ಈ ಕ್ಷೇತ್ರದಲ್ಲಿ ಪಕ್ಷದವರೇ ಶಾಸಕ ಆಗಿದ್ದಾರೆ. ಆದ್ದರಿಂದ ನನಗೆ ಇಲ್ಲಿ ಟಿಕೆಟ್ ಸಿಗುವ ಭರವಸೆ‌ ಇಲ್ಲ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.