ಬೀದರ್: ‘ಜನರು ತಮ್ಮನ್ನು ತಾವು ತಿದ್ದಿಕೊಳ್ಳದೆ ಸಮಾಜ ಸುಧಾರಣೆಗೆ ಮುಂದಾಗುತ್ತಾರೆ. ತಮ್ಮನ್ನು ತಾವು ತಿದ್ದಿಕೊಂಡಾಗ ಮಾತ್ರ ಸಮಾಜ ತನ್ನಿಂದ ತಾನೇ ಬದಲಾವಣೆ ಹೊಂದಲು ಸಾಧ್ಯ’ ಎಂದು ಬೆಂಗಳೂರಿನ ವಿಜಯ ಸಂಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಶಾಂತರಾಜು ಅಭಿಪ್ರಾಯ ಪಟ್ಟರು.
ನಗರದ ಕರ್ನಾಟಕ ಪದವಿ ಪೂರ್ವ ಕಾಲೇಜು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜಯಂತ್ಯುತ್ಸವದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಕುವೆಂಪು ಅವರ ಇಡೀ ಸಾಹಿತ್ಯದ ಕೇಂದ್ರದ ಆಶಯ, ವೈಚಾರಿಕತೆಯ ಸಮಸಮಾಜ ನಿರ್ಮಾಣ, ಸಾಮಾಜಿಕ ಅನಿಷ್ಠಗಳ ವಿರುದ್ಧ ಬರವಣಿಗೆಯ ಮೂಲಕ ಪ್ರತಿಭಟಿಸಿದ್ದಾರೆ. ಸಮಾಜ, ಧರ್ಮ, ರಾಜಕೀಯ ಹಾಗೂ ಧಾರ್ಮಿಕ ವಲಯಗಳು ಜಾತಿ ಸಂಕೋಲೆಗಳ ಭ್ರಮೆಗಳನ್ನು ಸೃಷ್ಟಿಸಿಕೊಂಡಿದ್ದು, ದೊಡ್ಡ ದುರಂತ. ಅದರಿಂದ ಹೊರಬರಬೇಕಾದರೆ ಕುವೆಂಪು ಅವರ ಸಾಹಿತ್ಯ ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು’ ಎಂದು ತಿಳಿಸಿದರು.
ಸಾಹಿತಿ ರಜಿಯಾ ಬಳಬಟ್ಟಿ ಮಾತನಾಡಿ,‘ ಕುವೆಂಪು 20ನೇಯ ಶತಮಾನದ ಬಹುದೊಡ್ಡ ದೈತ್ಯ ಪ್ರತಿಭೆ. ಜನಪ್ರತಿನಿಧಿಗಳು, ಮಠಾಧೀಶರು ಕುವೆಂಪು ಅವರ ಸಾಹಿತ್ಯವನ್ನು ಓದುವುದು ಅವಶ್ಯಕವಿದೆ ಎಂದು ಸಲಹೆ ನೀಡಿದರು.
ಜಗನ್ನಾಥ ಕಮಲಾಪೂರೆ, ಶಿವಶಂಕರ ಟೋಕರೆ ಮಾತನಾಡಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ರಾಜೇಶ್ವರಿ ಪಾಟೀಲ, ಮಹೇಶ ಬಿರಾದಾರ, ವಿದ್ಯಾವತಿ ಬಲ್ಲೂರ, ಎಂ.ಎಲ್.ರಾಸೂರ, ಶಿವಶಂಕರ ಸ್ವಾಮಿ, ವೀರಶೆಟ್ಟಿ ಪಾಟೀಲ ಇದ್ದರು. ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ಸ್ವಾಗತಿಸಿದರು. ಸಚಿನ ವಿಶ್ವಕರ್ಮ ನಿರೂಪಿಸಿದರು. ವೀರಶೆಟ್ಟಿ ಚನಶೆಟ್ಟಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.