
ಬೀದರ್: ಪುಸ್ತಕಗಳನ್ನೇಕೆ ಓದಬೇಕು ಎಂಬುದು ಈ ಕಾಲದ ಓದುಗರ ಪ್ರಶ್ನೆ. ಈಗಿನ ಹೆಚ್ಚಿನ ಲೇಖಕರು ಹೊಗಳಿಕೆ ಬಯಸುತ್ತಿದ್ದಾರೆ. ಹಾಗಾಗಿಯೇ ಈ ಲೇಖಕರ ಪುಸ್ತಕಗಳನ್ನು ಏಕೆ ಓದಬೇಕೆಂಬ ಪ್ರಶ್ನೆ ಓದು ಗರಲ್ಲಿ ಸಹಜವಾಗಿಯೇ ಮೂಡುತ್ತಿದೆ ಎಂದು ಸಾಹಿತಿ ಎಸ್. ದಿವಾಕರ್ ಅಭಿಪ್ರಾಯಪಟ್ಟರು.
ವೀರಲೋಕ ಬುಕ್ಸ್, ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದಲ್ಲಿ ಏರ್ಪಡಿಸಿರುವ ‘ವೀರಲೋಕ ಪುಸ್ತಕ ಸಂತೆ’ಯ ಎರಡನೇ ದಿನವಾದ ಭಾನುವಾರ ‘ಕಾಲದ ಎದುರು ನಿಂತ ಪದಗಳು’ ಗೋಷ್ಠಿಯಲ್ಲಿ ವಿಷಯ ಮಂಡಿಸಿ ಮಾತನಾಡಿದರು.
ಈ ಕಾಲಘಟ್ಟದಲ್ಲಿ ಓದುವುದಕ್ಕೆ ಅರ್ಹವಾದ ಪುಸ್ತಕಗಳು ಯಾವುವು ಎಂದು ಪಟ್ಟಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇಂದಿನ ಯುವಪೀಳಿಗೆ ಕೂಡ ಕುವೆಂಪು, ಬೇಂದ್ರೆ ಅವರನ್ನೇ ಹೆಚ್ಚಾಗಿ ಓದುತ್ತಿದ್ದಾರೆ. ಎಸ್.ಎಲ್. ಭೈರಪ್ಪನವರ ಸೃಜನಶೀಲ, ಡಿವಿಜಿಯವರ ಸೃಜನೇತರ ಕೃತಿಗಳನ್ನು ಇಷ್ಟ ಪಡುತ್ತಿದ್ದಾರೆ. ಇವರಿಗಿಂತ ನಾನು ಏನು ಭಿನ್ನವಾಗಿ ಬರೆಯಬಹುದು ಎಂದು ಲೇಖಕರು ಗಂಭೀರವಾಗಿ ಯೋಚಿಸಬೇಕು ಎಂದು ಸಲಹೆ ನೀಡಿದರು.
ಲೇಖಕ ಲಿಂಗರಾಜ ಸೊಟ್ಟಪ್ಪನವರ ಮಾತನಾಡಿ, ‘ಭಾಷೆ ಪರಿಕರವಷ್ಟೇ ಅಲ್ಲ, ಸಶಕ್ತ ಅಭಿವ್ಯಕ್ತಿ ಮಾಧ್ಯಮ. ಮನುಷ್ಯನ ಪರಿವರ್ತನೆಗಿರುವ ಸಾಹಿತ್ಯದ ಮಾಧ್ಯಮವೂ ಹೌದು ಎಂದರು.
ಲೇಖಕ ರಾಜಶೇಖರ ಹಳೇಮನೆ, ಸಾಹಿತಿ ರಾಗಂ (ರಾಜಶೇಖರಯ್ಯ ಮಠಪತಿ) ಮಾತನಾಡಿದರು. ಸಾಹಿತಿ ಶರತ್ ಭಟ್ ಸೆರಾಜೆ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.