ADVERTISEMENT

‘ಲಾಕ್‍ಡೌನ್ ಸಮಯ ಬಳಸಿಕೊಂಡೆ’

ರಾಜ್ಯಕ್ಕೆ 3ನೇ ರ‍್ಯಾಂಕ್‌ ಪಡೆದ ಅಪರಾಜಿತೇಶ್ವರಿ ಸೂರ್ಯಕಾಂತ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 15:46 IST
Last Updated 10 ಆಗಸ್ಟ್ 2020, 15:46 IST
ಅಪರಾಜಿತೇಶ್ವರಿ ಸೂರ್ಯಕಾಂತ
ಅಪರಾಜಿತೇಶ್ವರಿ ಸೂರ್ಯಕಾಂತ   

ಭಾಲ್ಕಿ: ಆರಂಭದಿಂದಲೇ ಶ್ರದ್ಧೆಯಿಂದ ಎಲ್ಲ ವಿಷಯಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದೆ. ಉತ್ತಮ ಫಲಿತಾಂಶ ಪಡೆಯುವ ನಿರೀಕ್ಷೆ ಇತ್ತು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಬೇಕೆ, ಬೇಡವೇ ಎಂಬ ಚರ್ಚೆ ನಡೆದಾಗ ಎಲ್ಲಿ ಪರೀಕ್ಷೆ ನಡೆಯುವುದಿಲ್ಲೇನೋ ಎನ್ನುವ ಭಯ ಕಾಡಿತ್ತು.

ನಿತ್ಯ ಆರು ತಾಸು ಕಡ್ಡಾಯವಾಗಿ ಓದುತ್ತಿದ್ದೆ. ಕಠಿಣ ಎನ್ನುವ ವಿಷಯಗಳನ್ನು ಮೊದಲು ಓದಿಕೊಳ್ಳುತ್ತಿದ್ದೆ. ಯಾವುದೇ ಪಾಠವನ್ನು ಕಂಠ ಪಾಠ ಮಾಡಿರಲಿಲ್ಲ. ವಿಷಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಒತ್ತುಕೊಟ್ಟಿದ್ದೆ. ಶಿಕ್ಷಕರನ್ನು ಭೇಟಿಯಾಗಿ ಗೊಂದಲ ನಿವಾರಿಸಿಕೊಳ್ಳುತ್ತಿದ್ದೆ.

ಲಾಕ್‍ಡೌನ್ ಸಮಯದ ಮೂರು ತಿಂಗಳ ಅವಧಿಯನ್ನು ಸಂಪೂರ್ಣವಾಗಿ ಓದಿಗೆ ಮೀಸಲಿಟ್ಟಿದ್ದೆ. ಗಣಿತ, ವಿಜ್ಞಾನ, ಇಂಗ್ಲಿಷ್ ಓದಿಗೆ ತುಸು ಹೆಚ್ಚು ಮಹತ್ವ ನೀಡಿದ್ದೆ. ಕನ್ನಡ ವಿಷಯದಲ್ಲಿ 125ಕ್ಕೆ 125, ಹಿಂದಿ, ಸಮಾಜ ವಿಜ್ಞಾನದಲ್ಲಿ 100ಕ್ಕೆ 100 ಅಂಕ ಪಡೆದುಕೊಂಡಿದ್ದೇನೆ.

ADVERTISEMENT

ವೈದ್ಯಳಾಗಿ ಸಮಾಜದಲ್ಲಿನ ಬಡ ಜನರ ಸೇವೆ ಮಾಡಬೇಕು. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕು ಎಂದು ನಿರ್ಧರಿಸಿದ್ದೇನೆ. ತಾಯಿ ಗೃಹಿಣಿಯಾಗಿದ್ದಾರೆ. ತಂದೆ ಸೂರ್ಯಕಾಂತ ಬಿರಾದಾರ ಅವರು ಭಾಲ್ಕಿ ತಾಲ್ಲೂಕಿನ ವಾಂಜರಖೇಡದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದಾರೆ. ತಂದೆ, ತಾಯಿ ನೀಡಿದ ಪ್ರೋತ್ಸಾಹ ಮರೆಯಲಾಗದು ಎಂದು ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್‌ (625ಕ್ಕೆ 621) ಪಡೆದ ತಾಲ್ಲೂಕಿನ ಚನ್ನಬಸವೇಶ್ವರ ಗುರುಕುಲ ಶಾಲೆಯ ವಿದ್ಯಾರ್ಥಿನಿ ಅಪರಾಜಿತೇಶ್ವರಿ ಸೂರ್ಯಕಾಂತ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.