ADVERTISEMENT

ಭಾಷೆಗಿಂತ ರಾಷ್ಟ್ರಪ್ರೇಮ ದೊಡ್ಡದು

ಬೀದರ್ ತಾಲ್ಲೂಕು ಮಟ್ಟದ ಗೀತ ಗಾಯನ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 15:35 IST
Last Updated 8 ಆಗಸ್ಟ್ 2019, 15:35 IST
ಬೀದರ್‌ನ ಶಿವಕುಮಾರೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ವತಿಯಿಂದ ಗುರುವಾರ ಆಯೋಜಿಸಿದ್ದ ಬೀದರ್ ತಾಲ್ಲೂಕು ಮಟ್ಟದ ಗೀತ ಗಾಯನ ಸ್ಪರ್ಧೆಯನ್ನು ಭಾರತ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಘಟಕದ ಆಯುಕ್ತೆ ಲೀಲಾವತಿ ಚಾಕೋತೆ ಹಾಗೂ ನಿವೃತ್ತ ಶಿಕ್ಷಕಿ ಪುಣ್ಯವತಿ ವಿಸಾಜಿ ಜಂಟಿಯಾಗಿ ಉದ್ಘಾಟಿಸಿದರು
ಬೀದರ್‌ನ ಶಿವಕುಮಾರೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ವತಿಯಿಂದ ಗುರುವಾರ ಆಯೋಜಿಸಿದ್ದ ಬೀದರ್ ತಾಲ್ಲೂಕು ಮಟ್ಟದ ಗೀತ ಗಾಯನ ಸ್ಪರ್ಧೆಯನ್ನು ಭಾರತ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಘಟಕದ ಆಯುಕ್ತೆ ಲೀಲಾವತಿ ಚಾಕೋತೆ ಹಾಗೂ ನಿವೃತ್ತ ಶಿಕ್ಷಕಿ ಪುಣ್ಯವತಿ ವಿಸಾಜಿ ಜಂಟಿಯಾಗಿ ಉದ್ಘಾಟಿಸಿದರು   

ಬೀದರ್‌: ‘ಮನುಷ್ಯ ಬಾಹ್ಯವಾಗಿ ಪ್ರಗತಿ ಸಾಧಿಸುತ್ತಿದ್ದರೂ ಆಂತರಿಕವಾಗಿ ಕುಬ್ಜನಾಗುತ್ತಿದ್ದಾನೆ. ವಿದ್ಯಾವಂತರೇ ಭಾಷೆ, ಇನ್ನಿತರ ಹೆಸರಲ್ಲಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಭಾಷಾ ಪ್ರೇಮಕ್ಕಿಂತ ರಾಷ್ಟ್ರಪ್ರೇಮ ದೊಡ್ಡದು ಎನ್ನುವುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು’ ಎಂದು ಭಾರತ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಘಟಕದ ಆಯುಕ್ತೆ ಲೀಲಾವತಿ ಚಾಕೋತೆ ಹೇಳಿದರು.

ನಗರದ ಶಿವಕುಮಾರೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ವತಿಯಿಂದ ಗುರುವಾರ ಆಯೋಜಿಸಿದ್ದ ಬೀದರ್ ತಾಲ್ಲೂಕು ಮಟ್ಟದ ಗೀತ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳಲ್ಲಿ ಚಿಕ್ಕಂದಿನಲ್ಲೇ ರಾಷ್ಟ್ರಪ್ರೇಮ ಬೆಳೆಸಬೇಕು. ಸ್ಕೌಟ್ ಮತ್ತು ಗೈಡ್ಸ್ ಮೂಲಕ ಅವರಲ್ಲಿ ದೇಶ ಪ್ರೇಮ ಬಿತ್ತಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಶಿಕ್ಷಕಿ ಪುಣ್ಯವತಿ ವಿಸಾಜಿ ಮಾತನಾಡಿ, ‘ಪ್ರತಿಯೊಂದು ಶಾಲೆಯಲ್ಲೂ ಸ್ಕೌಟ್ ಮತ್ತು ಗೈಡ್ಸ್ ಘಟಕ ಕಾರ್ಯ ನಿರ್ವಹಿಸಬೇಕು. ವಿದ್ಯಾರ್ಥಿಗಳು ಅದರಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಬೇಕು’ ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಈಚೆಗೆ ನಿಧನರಾದ ಕೇಂದ್ರ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಅಶೋಕ ಬಾಬು ಅವರು ರಾಷ್ಟ್ರಭಕ್ತಿಗೀತೆಗೆ ಸಂಗೀತವಾದ್ಯ ನುಡಿಸಿದರು.

ಸ್ಕೌಟ್ ವಿಭಾಗದಲ್ಲಿ ಸಂಸ್ಕಾರ ಇಂಟರ್‌ ನ್ಯಾಷನಲ್‌ ಶಾಲೆ ವಿದ್ಯಾರ್ಥಿಗಳು ಹಾಗೂ ಗೈಡ್ಸ್‌ ವಿಭಾಗದಲ್ಲಿ ಶಿವಕುಮಾರೇಶ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಗುರುನಾನಕ ಶಾಲೆ ವಿದ್ಯಾರ್ಥಿಗಳು ಬಹುಮಾನ ಪಡೆದರು.

ಗೋಪಾಲರೆಡ್ಡಿ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸ್ಕೌಟ್‌ ಮುಖ್ಯ ಆಯುಕ್ತೆ ಗುರಮ್ಮ ಸಿದ್ದಾರೆಡ್ಡಿ , ಸಂಘಟನಾ ಆಯುಕ್ತ ಕೆ.ಎಸ್. ಚಳಕಾಪೂರೆ, ಔರಾದ್‌ ತಾಲ್ಲೂಕು ಸ್ಕೌಟ್ ಕಾರ್ಯದರ್ಶಿ ಶಿವಕುಮಾರ ಮೆಣಸೆ, ಹುಮನಾಬಾದ್‌ ತಾಲ್ಲೂಕು ಕಾರ್ಯದರ್ಶಿ ಶರಣಪ್ಪ ಬರೂರ, ಸುರೇಶ ಹೊಸಮನಿ, ಜಿಲ್ಲಾ ಗೈಡ್ ತರಬೇತಿ ಆಯುಕ್ತೆ ಸುಸಾನಾ, ಸಚಿನ್ ಕಲಾಲ, ನಿವೃತ್ತ ಅಧಿಕಾರಿ ಕಾಶೀನಾಥ ಪಾಟೀಲ, ಶ್ರೀನಿವಾಸ ಬಿರಾದಾರ, ಉಮೇಶ ಅಷ್ಟೂರೆ ಇದ್ದರು.

ಚಂದ್ರಕಾಂತ ಬೆಳಕುಣೆ ಸ್ವಾಗತಿಸಿದರು. ರಮೇಶ ತಿಬಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.