ಬೀದರ್: ‘ಬಿದರಿ ಕುಶಲಕರ್ಮಿಗಳು ಹೊಸ ವಿನ್ಯಾಸದ ಕಲಾಕೃತಿಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು. ವ್ಯವಹಾರ ವಿಸ್ತರಿಸಲು ಡಿಜಿಟಲ್ ಮಾರುಕಟ್ಟೆಗೆ ಹೆಚ್ಚು ಒತ್ತು ಕೊಡಬೇಕು’ ಎಂದು ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಸತೀಶ್ ಎಂ ಸಲಹೆ ನೀಡಿದರು.
ಇಲ್ಲಿಯ ಶಾರದಾ ರುಡ್ಸೆಟಿಯಲ್ಲಿ ಬ್ಲ್ಯಾಕ್ ಗೋಲ್ಡ್ ಬಿದರಿ ಕುಶಲಕರ್ಮಿಗಳ ಉತ್ಪಾದಕರ ಕಂಪನಿ ವತಿಯಿಂದ ಆಯೋಜಿಸಿದ್ದ ಬಿದರಿ ಕರಕುಶಲತೆಯ ಅಭಿವೃದ್ಧಿ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಬಿದರಿ ಕಲೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಕುಶಲಕರ್ಮಿಗಳು ಸಂಘಟಿತರಾಗಿ ಹೊಸದಾಗಿ ಸ್ಥಾಪನೆ ಮಾಡಿರುವ ಉತ್ಪಾದನಾ ಕಂಪನಿಯ ಸದಸ್ಯತ್ವ ಪಡೆದು ಕಂಪನಿ ಬೆಳೆಸಬೇಕು ಹಾಗೂ ಕಲೆಯನ್ನೂ ಬೆಳೆಸಬೇಕು’ ಎಂದರು.
ಜವಳಿ ಇಲಾಖೆಯ ಹಸ್ತಶಿಲ್ಪ ವಿಭಾಗದ ಸಹಾಯಕ ನಿರ್ದೇಶಕಿ ದರ್ಶನಾ ರಾಘವನ್, ‘ಕಾರ್ಯಾಗಾರದ ಮೂಲಕ ಕಚೇರಿಯ ಯೋಜನೆಗಳು, ಉತ್ಪಾದಕರ ಕಂಪನಿಯ ನೀತಿ ನಿಯಮಗಳು, ಸದಸ್ಯರ ಜಬಾಬ್ದಾರಿಗಳು, ಜಿಎಸ್ಟಿ., ಲೆಕ್ಕ ಪರಿಶೋಧನೆ, ಡಿಜಿಟಲ್ ಮಾರುಕಟ್ಟೆ, ವಿನ್ಯಾಸ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಬ್ಯಾಂಕಿನ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲಾಗಿದೆ’ ಎಂದರು.
ಕರಕುಶಲ ಅಭಿವೃದ್ಧಿ ಅಧಿಕಾರಿ ಸುಶೀಲಕುಮಾರ, ನಬಾರ್ಡ್ನ ರಾಮಾರಾವ್ ವೈ ಮಾತನಾಡಿದರು. ವ್ಯವಸ್ಥಾಪಕ ನಿರ್ದೇಶಕ ಎಂ.ಡಿ. ಶಫಿಯೋದ್ದಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿನ್ಯಾಸಗಾರ ಮುಕ್ತೇಶ್ವರ ಪ್ರಸಾದ, ಎಂಎ.ರೌಫ್ ಹಾಗೂ 100 ಜನ ಬಿದ್ರಿ ಕುಶಲಕರ್ಮಿಗಳು ಭಾಗಹಿಸಿದ್ದರು. ಸೂರ್ಯಕಾಂತ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.