ಔರಾದ್: ‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸುವ ಬದಲು ಅಡ್ಡಗಾಲು ಹಾಕುತ್ತಿದ್ದಾರೆ’ ಎಂದು ಬೀದರ್ ಲೋಕಸಭೆ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಭಗವಂತ ಖೂಬಾ ವಾಗ್ದಾಳಿ ನಡೆಸಿದರು.
ತಾಲ್ಲೂಕಿನ ಸಂತಪುರನಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು,‘ಔರಾದ್ ತಾಲ್ಲೂಕಿನಲ್ಲಿ ಸಿಪೆಟ್ ಕಾಲೇಜು ಮಂಜೂರು ಆಗಿದೆ. ಆದರೆ ರಾಜ್ಯ ಸರ್ಕಾರದ ಅನುದಾನ ಬಿಡುಗಡೆಯಾಗದೆ ಸದ್ಯ ಹಾಲಹಳ್ಳಿ ಬಳಿ ವಿಶ್ವವಿದ್ಯಾಲಯದಲ್ಲಿ ತರಗತಿ ನಡೆಸುತ್ತಿದ್ದೇವೆ. ಜಿಲ್ಲೆಯ 16,000 ಜನರಿಗೆ ಉದ್ಯೋಗ ನೀಡುವ ಸೋಲಾರ್ ಪಾರ್ಕ್ ಮಂಜೂರು ಆದರೂ ರಾಜ್ಯ ಸರ್ಕಾರದಿಂದ ಭೂಮಿ ಕೊಡಿಸುತ್ತಿಲ್ಲ. ಖಂಡ್ರೆ ಅಭಿವೃದ್ಧಿ ವಿರೋಧಿ ವ್ಯಕ್ತಿ. ಇವರಿಗೆ ಜಿಲ್ಲೆ ಅಭಿವೃದ್ಧಿ ಬೇಕಿಲ್ಲ. ಕುಟುಂಬ ಅಭಿವೃದ್ಧಿ ಆದರೆ ಸಾಕು ಎನ್ನುವ ಮನೋಭಾವ ಹೊಂದಿದ್ದಾರೆ’ ಎಂದರು.
‘ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಕಳೆದ ನಾಲ್ಕು ದಶಕದ ಬೇಡಿಕೆ ಬೀದರ್-ಔರಾದ್ ಹೆದ್ದಾರಿ ಕಾಮಗಾರಿ ಈಗಾಗಲೇ ಪೂರ್ಣ ಆಗಿದೆ. ಬೀದರ್-ನಾಂದೇಡ್ ಹೊಸ ರೈಲು ಮಾರ್ಗ ಆಗಲಿದೆ’ ಎಂದು ಹೇಳಿದರು.
ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ್ ಮಾತನಾಡಿ,‘ಮೋದಿ ಪ್ರಧಾನಿಯಾದ ಮೇಲೆ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಭಗವಂತ ಖೂಬಾ ಅವರ ಅಭಿವೃದ್ಧಿ ಕಾರ್ಯ ಮೆಚ್ಚಿ ಅವರಿಗೆ 3ನೇ ಬಾರಿಗೆ ಟಿಕೆಟ್ ನೀಡಲಾಗಿದೆ. ಅವರನ್ನು ಗೆಲ್ಲಿಸುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲಿದೆ’ ಎಂದು ಹೇಳಿದರು.
ಚಿಂಚೋಳಿಯಲ್ಲಿ ರೈತರಿಗಾಗಿ ಆರಂಭಿಸಲಾದ ಸಕ್ಕರೆ ಕಾರ್ಖಾನೆಯನ್ನು ಇಲ್ಲಿನ ಉಸ್ತುವಾರಿ ಸಚಿವರು ಬೀಗ ಹಾಕಿಸಿದ್ದಾರೆ. ಈಗ ಇವರ ಮಗ ಸಂಸದರಾದರೆ ರೈತರ ಗತಿ ಏನು ಎಂದು ದೂರಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಮಂಡಲ ಅಧ್ಯಕ್ಷ ರಾಮಶೇಟ್ಟಿ ಪನ್ನಾಳೆ, ಮುಖಂಡ ಶರಣಪ್ಪ ಪಂಚಾಕ್ಷರಿ, ಬಾಬುರಾವ ಕಾರಬಾರಿ, ಜಗನ್ನಾಥ ಜಮಾದಾರ, ರಾಜಶೇಖರ ನಾಗಮೂರ್ತಿ, ಜಗನ್ನಾಥ ಪಾಟೀಲ್, ಕಿರಣ ಪಾಟೀಲ್, ಜಗನ್ನಾಥ ಪರಶೆಟ್ಟಿ, ಸಂತೋಷ ಪಾಟೀಲ, ಸಚಿನ್ ಯಡವೆ, ಸುನೀಲ ಪಾಟೀಲ್, ಬಸಯ್ಯ ಸ್ವಾಮಿ, ಗಣಪತಿ ದೇಶಪಾಂಡೆ, ದೇವರಾಜ ಮೇತ್ರೆ, ಬಾಬಾ ಸೈಲಾನಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.