ಬೀದರ್: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಬುಧವಾರ ದಿನವಿಡೀ ಕನ್ನಡದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕನ್ನಡ ನಾಡು-ನುಡಿಯ ಅಭಿಮಾನ ಮೆರೆದರು.
‘ಸಾಹಿತಿ ಸಂಗಮ’ ಕಾರ್ಯಕ್ರಮದ ಅಡಿಯಲ್ಲಿ ಬಿಡುವಿಲ್ಲದಂತೆ ನಗರದಾದ್ಯಂತ ಸಂಚರಿಸಿ ಸಾಹಿತಿಗಳ ಮನೆಗಳಿಗೆ ಭೇಟಿ ನೀಡಿದರು. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸಾಹಿತ್ಯ ಕೃತಿಗಳನ್ನು ವಿತರಿಸಿದರು.
ಸಾಹಿತಿಗಳಾದ ಸಂಜೀವಕುಮಾರ ಅತಿವಾಳೆ, ರಮೇಶ ಬಿರಾದಾರ, ಎಸ್.ಎಂ.ಜನವಾಡಕರ್, ರಘುಶಂಖ ಭಾತಂಬ್ರಾ, ಪ್ರೊ.ಎಸ್.ವಿ.ಕಲ್ಮಠ, ರಘುನಾಥ ಹಡಪದ, ಸುನೀತಾ ಬಿರಾದಾರ, ಅಕ್ಕ ಅನ್ನಪೂರ್ಣ, ವಿಮರ್ಶಕಿ ರಜಿಯಾ ಬಳಬಟ್ಟಿ, ಕತೆಗಾರ ಗುರುನಾಥ ಅಕ್ಕಣ್ಣ, ಲೇಖಕಿಯರಾದ ಜಗದೇವಿ ದುಬಲಗುಂಡಿ, ಪುಷ್ಪಾ ಕನಕ, ಕಾಶೀನಾಥ ಚಲುವಾ, ಪ್ರೊ.ಓಂಪ್ರಕಾಶ ದಡ್ಡೆ, ಸುನೀತಾ ದಾಡಗೆ, ಸುಭಾಷ ನೇಳಗೆ, ಸಾಧನಾ ರಂಜೋಳಕರ್, ಕವಿಯತ್ರಿ ಶ್ರೀದೇವಿ ಹೂಗಾರ ಹಾಗೂ ಮೇನಕಾ ಪಾಟೀಲ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.
ನಗರದ ಕೃಷಿ ಕಾಲೊನಿಯಲ್ಲಿರುವ ಶಿವಕುಮಾರ ಕಟ್ಟೆ ಅವರ ನಿವಾಸಕ್ಕೆ ತೆರಳಿದ ಸಚಿವರು ಅವರ ಪ್ರವಾಸ ಕಥನ 'ನಾಲ್ದೇರಾ' ಕೃತಿಯನ್ನು ಬಿಡುಗಡೆ ಮಾಡಿದರು. ₹ 200 ಕೊಟ್ಟು ಕೃತಿಯ ಪ್ರತಿಯೊಂದನ್ನು ಖರೀದಿಸಿದರು.
ಸಾಹಿತಿಗಳ ಬರಹದ ಜತೆಗೆ ಅವರ ಅರ್ಥಿಕ ಪರಿಸ್ಥಿತಿಯನ್ನು ವಿಚಾರಿಸಿದರು, ಸಾಹಿತಿ ರಮೇಶ ಬಿರಾದಾರ ಅವರ ಮನೆಗೆ ಭೇಟಿ ನೀಡಿದ ವೇಳೆ ಬಿರಾದಾರ ಅವರಿಗೆ ₹ 20 ಸಾವಿರ ನೀಡಿ, ಪುಸ್ತಕ ಪ್ರಕಟಣೆಗೆ ಪ್ರೋತ್ಸಾಹಿಸಿದರು.
ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಸಾಹಿತಿ ಸಂಗಮ ಕಾರ್ಯಕ್ರಮ ರೂಪಿಸಿ ಸಾಹಿತಿಗಳ ಮನೆಗೆ ಭೇಟಿ ನೀಡುತ್ತಿರುವ ಸಚಿವ ಪ್ರಭು ಚವಾಣ್ ಅವರ ಕನ್ನಡ ನಾಡು-ನುಡಿ ಬಗೆಗಿನ ಕಾಳಜಿ ಗಮನಾರ್ಹ ಮತ್ತು ಅಭಿನಂದನಾರ್ಹ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹಾಗೂ ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರ ಬಣ್ಣಿಸಿದರು.
ದೇಶಾಂಶ ಹುಡಗಿ, ಶಿವಶಂಕರ ಟೋಕರೆ, ಎಂ.ಪಿ.ಮುದಾಳೆ, ಶಿವು ಪಾಟೀಲ, ದೇವೇಂದ್ರ ಕರಂಜೆ, ಕಸ್ತೂರಿ ಪಟಪಳ್ಳಿ, ಗವಿಸಿದ್ದಪ್ಪ ಹೊಸಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.