ADVERTISEMENT

ಚಿಂತಾಕಿಯಲ್ಲಿ ಸರ್ವಾಧಿಕಾರ ನಡೆಯಲು ಬಿಡಲ್ಲ: ಈಶ್ವರ ಖಂಡ್ರೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 16:36 IST
Last Updated 29 ಏಪ್ರಿಲ್ 2024, 16:36 IST
ಔರಾದ್ ತಾಲ್ಲೂಕಿನ ಚಿಂತಾಕಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು
ಔರಾದ್ ತಾಲ್ಲೂಕಿನ ಚಿಂತಾಕಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು    

ಔರಾದ್: ‘ಚಿಂತಾಕಿ ಭಾಗದಲ್ಲಿ ಕೆಲವರು ತಮ್ಮದೇ ಸಾಮ್ರಾಜ್ಯ ಮಾಡಿಕೊಂಡು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ನಮ್ಮ ಸರ್ಕಾರ ಅಂತಹದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಾಗಮಾರಪಳ್ಳಿ ಸಹೋದರರಿಗೆ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಚಿಂತಾಕಿಯಲ್ಲಿ ಭಾನುವಾರ ಸಂಜೆ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ‘ಇದು ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ ಸರ್ವಾಧಿಕಾರಿ ಧೋರಣೆ ನಡೆಯುವುದಿಲ್ಲ. ಚಿಂತಾಕಿಯ ಜನರು ಯಾರಿಗೂ ಅಂಜಿ, ಹೆದರಿ ಬದುಕು ನಡೆಸುವ ಅಗತ್ಯವಿಲ್ಲ. ನಾವು ನಿಮ್ಮ ಒಂದು ಕೂದಲಿಗೂ ಏನು ಆಗಲು ಬಿಡುವುದಿಲ್ಲ’ ಎಂದು ಹೇಳಿದರು.

‘ನಾನು ಶಾಸಕ, ಸಚಿವನಾಗಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ರೈತಪರ ಅಲ್ಲದ ಬಿಜೆಪಿ ಸರ್ಕಾರ ತಿರಸ್ಕರಿಸಿ. ಐದು ಗ್ಯಾರಂಟಿ ಯಶಸ್ವಿಯಾಗಿ ಜಾರಿಗೆ ತಂದ ಕಾಂಗ್ರೆಸ್ ಬೆಂಬಲಿಸಿ’ ಎಂದರು.

ADVERTISEMENT

‘ಜಿಲ್ಲೆಗೆ ಖಂಡ್ರೆ ಕುಟುಂಬ ಕೊಡುಗೆ ಏನು ಎಂದು ಪ್ರಶ್ನಿಸುವ ಭಗವಂತ ಖೂಬಾ ಅವರಿಗೆ ಭಾಲ್ಕಿಯಲ್ಲಿ ಆಗಿರುವ ಅಭಿವೃದ್ಧಿ ನೋಡಿ ಎಂದರು. ಖೂಬಾ ಹೇಳುವ ಸುಳ್ಳನ್ನು ಜನ ನಂಬುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ರಹೀಂಖಾನ್ ಮಾತನಾಡಿ ‘ಯುವ ನಾಯಕ ಸಾಗರ್ ಖಂಡ್ರೆ ಕಾನೂನು ಪದವಿ ಪಡೆದು ವಕೀಲರಾಗಿದ್ದಾರೆ. ಚಿಕ್ಕವರಾದರೂ ಅವರ ಬಳಿ ಎಲ್ಲ ವರ್ಗದವರ ಬಗ್ಗೆ ಕಳಕಳಿ ಹಾಗೂ ಗೌರವವಿದೆ’ ಎಂದರು.

ಭೀಮಸೇನರಾವ್ ಸಿಂಧೆ, ಅಮರ ಜಾಧವ್, ರಾಜಕುಮಾರ ಹಲಬರ್ಗೆ, ಬಸವರಾಜ ದೇಶಮುಖ, ಅಮೃತರಾವ  ಚಿಮಕೋಡ್, ಶಿವಕುಮಾರ್, ಪ್ರಕಾಶ್ ಪಾಟೀಲ್, ಕೆ. ಪುಂಡಲಿಕರಾವ, ಗೀತಾ ಚಿದ್ರೆ, ಮಾಜೀದ್ ಪಟೇಲ್, ಗುರುನಾಥ ರೆಡ್ಡಿ, ಡಾ. ಫಯಾಜ್‍ಅಲಿ, ಪ್ರೇಮಾ ಗಂದಗೆ, ಶಿವರಾಜ್ ದೇಶಮುಖ ಹಾಜರಿದ್ದರು.

ನಂತರ ಎಕಂಬಾ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಕೇಂದ್ರ ಸರ್ಕಾರ ಹಾಗೂ ಭಗವಂತ ಖೂಬಾ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.