ಬೀದರ್: ಸಾರ್ವಜನಿಕರಿಗೆ ಜಮೀನು ದಾಖಲೆಗಳು ಸುಲಭವಾಗಿ ದೊರಕುವಂತಾಗಲು ಒಂದು ತಿಂಗಳಲ್ಲಿ ಭೂ ಪರಿವರ್ತನೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಔರಾದ್ ತಾಲ್ಲೂಕಿನ ವಡಗಾಂವ(ಡಿ) ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹಾಗೂ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಅವರು ಈ ಮಾಹಿತಿ ನೀಡಿದರು.
‘ಕೃಷಿ ಜಮೀನನ್ನು ಕೃಷಿಯೇತರ ಜಮೀನಾಗಿ ಪರಿವರ್ತಿಸಲು ಅನೇಕ ಅಡೆತಡೆಗಳು ಎದುರಾಗುತ್ತಿವೆ. 79ಎಬಿ ತೆಗೆದು ಮಧ್ಯವರ್ತಿಗಳ ಹಾವಳಿ ತಡೆಯಲು ಹಾಗೂ ವಿಳಂಬವಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದ. ಕಂದಾಯ ಕಚೇರಿಗಳಲ್ಲಿ ಬಾಕಿ ಉಳಿದಿರುವ ಕಡತಗಳ ವಿಲೇವಾರಿಗೆ ಜಿಲ್ಲಾಧಿಕಾರಿಗೆ ಎರಡು ವಾರಗಳ ಅವಕಾಶ ಕೊಡಲಾಗಿದೆ. ಯಾವುದೇ ಕಡತಗಳು ಕಚೇರಿಗಳಲ್ಲಿ ವಿಲೇವಾರಿ ಆಗದೇ ಉಳಿದುಕೊಳ್ಳಬಾರದು ’ ಎಂದರು.
‘ಚಿತ್ರದುರ್ಗದಲ್ಲಿ 40 – 50 ವರ್ಷಗಳಿಂದ ಭೂಮಿ ಉಳುಮೆ ಮಾಡುತ್ತಿರುವವರಿಗೆ ಮಾಲೀಕತ್ವ ವಹಿಸಿ ಕೊಡಲಾಗುವುದು. ಇದಕ್ಕಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು. 70 ವರ್ಷ ಜನರು ಕಂದಾಯ ಇಲಾಖೆ ಕಚೇರಿಗೆ ಅಲೆದಾಡಿದ್ದಾರೆ. ಇನ್ನು ಕಂದಾಯ ಇಲಾಖೆಯೇ ಸಾರ್ವಜನಿಕರ ಮನೆ ಬಾಗಿಲಿಗೆ ಹೋಗುವಂತೆ ಮಾಡಲಾಗುವುದು. ಈ ಮೂಲಕ ರಾಜ್ಯದಲ್ಲಿ ಇನ್ನಷ್ಟು ಕ್ರಾಂತಿ ಮಾಡಲಾಗುವುದು’ ಎಂದು ತಿಳಿಸಿದರು.
ಸಚಿವರು ಗ್ರಾಮಕ್ಕೆ ಬಂದಿದ್ದಾರೆ ಎಂದು ಒಂದು ದಿನ ಕೆಲಸ ಮಾಡಿದರೆ ಸಾಲದು. ಸಚಿವರು ಇಲ್ಲದ ವೇಳೆಯಲ್ಲೂ ಮಾತೃಹೃದಯದಿಂದ ಜನರಿಗೆ ಸೇವೆ ಒದಗಿಸಬೇಕು. ಈ ಮೂಲಕ ಜನರ ಪ್ರೀತಿಗೆ ಪಾತ್ರರಾಗಬೇಕು ಎಂದರು.
ಜಿಲ್ಲಾಧಿಕಾರಿಗಳು ಪ್ರತಿ ಶನಿವಾರ ಒಂದು ತಾಲ್ಲೂಕು ಕಚೇರಿಗೆ ಹೋಗಬೇಕು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ತಾಲ್ಲೂಕು ಕಚೇರಿಯಲ್ಲೇ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.