ADVERTISEMENT

ಬೀದರ್‌ ಜಿಲ್ಲೆಯಲ್ಲಿ ಕೊರೊನಾ ದ್ವಿಶತಕ

ಬುಧವಾರ ಒಂದೇ ದಿನ 32 ಜನರಿಗೆ ಕೋವಿಡ್ 19 ಸೋಂಕು

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 2:52 IST
Last Updated 4 ಜೂನ್ 2020, 2:52 IST
   

ಬೀದರ್‌: ಹುಮನಾಬಾದ್‌ ತಾಲ್ಲೂಕಿನಲ್ಲಿ 12, ಬಸವಕಲ್ಯಾಣ ತಾಲ್ಲೂಕಿನ 11 , ಔರಾದ್ ತಾಲ್ಲೂಕಿನ 5 ಹಾಗೂ ಭಾಲ್ಕಿ ತಾಲ್ಲೂಕಿನ ನಾಲ್ವರು ಸೇರಿ ಜಿಲ್ಲೆಯಲ್ಲಿ ಒಂದೇ ದಿನ ಒಟ್ಟು 32 ಜನರಿಗೆ ಕೋವಿಡ್‌ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೋವಿಡ್ ವೈರಾಣು ಪೀಡಿತರ ಸಂಖ್ಯೆ 207ಕ್ಕೆ ಏರಿದೆ.

ಬಸವಕಲ್ಯಾಣ ತಾಲ್ಲೂಕಿನ ಚಿಟ್ಟಾ(ಕೆ) ತಾಂಡಾದ 9, ಕಿಣ್ಣಿವಾಡಿ ಹಾಗೂ ಗಂಗಾರಾಮ ತಾಂಡಾದ ತಲಾ ಒಬ್ಬರು ಸೇರಿ 11 ಮಂದಿಗೆ ಕೋವಿಡ್‌ 19 ಸೋಂಕು ತಗುಲಿದೆ.

ಹುಮನಾಬಾದ್‌ ಪಟ್ಟಣದ ಜೋಶಿಗಲ್ಲಿಯ ಮೂವರು ಮಹಿಳೆಯರು, ಇಬ್ಬರು ಪುರುಷರು, ಹುಮನಾಬಾದ್‌ ತಾಲ್ಲೂಕಿನ ದುಬಲಗುಂಡಿಯಲ್ಲಿ ಮುಂಬೈನಿಂದ ಬಂದು ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಕ್ವಾರಂಟೈನ್‌ ಆಗಿದ್ದ 22 ವರ್ಷದ ಯುವಕ ಹಾಗೂ ಹಿಲಾಲಪುರದ 36 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ADVERTISEMENT

ಮುಂಬೈನಿಂದ ಹುಮನಾಬಾದ್‌ಗೆ ಬಂದ 63 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 16 ವರ್ಷದ ಇಬ್ಬರು ಬಾಲಕರು, 19 ವರ್ಷದ ಯುವಕ, 21 ಹಾಗೂ 35 ವರ್ಷದ ಮಹಿಳೆಯರ ವೈದ್ಯಕೀಯ ವರದಿ ಪಾಸಿಟಿವ್‌ ಬಂದಿದೆ.

ಔರಾದ್ ತಾಲ್ಲೂಕಿನ ಏಕಂಬಾದ 40, 34 ವರ್ಷದ ಒಂದೇ ಕುಟುಂಬದ ಇಬ್ಬರು ಪುರುಷರು ಹಾಗೂ 34 ವರ್ಷದ ಮಹಿಳೆಗೆ ಹಾಗೂ ಚಿಮ್ಮೆಗಾಂವ್ ತಾಂಡಾದ 47 ಹಾಗೂ 46 ವರ್ಷದ ಇಬ್ಬರು ಪುರುಷರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇವರು ಮೇ 18 ರಂದು ಮುಂಬೈನಿಂದ ಬಂದು ಕ್ವಾರಂಟೈನ್ ಕೇಂದ್ರದಲ್ಲಿ ಇದ್ದರು.

ಬೀದರ್‌ ಉಪ ವಿಭಾಗಾಧಿಕಾರಿ ಅಕ್ಷಯ ಶ್ರೀಧರ, ತಹಶೀಲ್ದಾರ್ ಎಂ. ಚಂದ್ರಶೇಖರ, ತಾಲ್ಲೂಕು ಆರೋಗ್ಯಾಧಿಕಾರಿ ಶರಣಯ್ಯ ಸ್ವಾಮಿ, ಏಕಂಬಾ ಮತ್ತು ಚಿಮ್ಮೆಗಾಂವ್ ತಾಂಡಾಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಎರಡೂ ಊರುಗಳ ಮೂರು ಕಿ.ಮೀ. ಅಂತರದೊಳಗೆ ಸೀಲ್ ಡೌನ್ ಮಾಡಿ ಇಲ್ಲಿ ಜನ ಹೊರ ಬರದಂತೆ ನಿರ್ಬಂಧ ವಿಧಿಸಿದ್ದಾರೆ.

ಕಮಲನಗರ ತಹಶೀಲ್ದಾರ್ ರಮೇಶ ಪೆದ್ದೆ, ಡಾ.ನಿತಿನ್, ಕಂದಾಯ ನಿರೀಕ್ಷಕ ರಮೇಶ , ಪೋಲಿಸರು ಹಾಗೂ ವೈದ್ಯರು ಗ್ರಾಮದಲ್ಲಿ ಠಿಕಾಣಿ ಹೂಡಿದ್ದು, ಗ್ರಾಮಸ್ಥರು ಅನಗತ್ಯವಾಗಿ ಮನೆಗಳಿಂದ ಹೊರ ಬಂದು ಸಾರ್ವಜನಿಕವಾಗಿ ಸಂಚರಿಸದಂತೆ ಎಚ್ಚರ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.