ಬೀದರ್: ‘ಮುಧೋಳ ಬೇಟೆ ನಾಯಿ ಭಾರತೀಯ ಸೇನೆಯಲ್ಲಿ ಸೇರ್ಪಡೆಗೊಂಡಿದೆ’ ಎಂದು ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಎಚ್.ಡಿ. ನಾರಾಯಣಸ್ವಾಮಿ ಹೇಳಿದರು.
‘ಕರ್ನಾಟಕದ ಶ್ವಾನ ತಳಿಗೆ ಸೇನೆಯಲ್ಲಿ ಅವಕಾಶ ದೊರೆತಿರುವುದು ವಿಶೇಷವಾಗಿದೆ. ಯಾವುದೇ ವಾತಾವರಣಕ್ಕೆ ಒಗ್ಗಿಕೊಳ್ಳುವ ಹಾಗೂ ಗುರಿ ತಲುಪುವ ಸಾಮರ್ಥ್ಯ ಮುಧೋಳ ಬೇಟೆ ನಾಯಿಗೆ ಇದೆ. ತಾಂತ್ರಿಕ ಕಾರಣದಿಂದ ಸೇನೆಯಲ್ಲಿ ಸೇರಿಸಿಕೊಂಡಿರಲಿಲ್ಲ. ಸೇನೆಯ ಅಧಿಕಾರಿಗಳು ಕೇಳಿದ ಪೂರ್ಣ ಮಾಹಿತಿ ಪೂರೈಸಿದ ನಂತರ ಸೇನೆಯಲ್ಲಿ ಸೇರಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.
‘ದೇಸಿ ತಳಿಯಾಗಿರುವ ಕಾರಣ ತರಬೇತಿಗೆ ಸ್ವಲ್ಪ ಸಮಯ ಬೇಕಾಗುತ್ತದೆ. ತರಬೇತಿ ಅವಧಿಯಲ್ಲಿ ಸಹಜವಾಗಿಯೇ ಬೌದ್ಧಿಕ ಬೆಳವಣಿಗೆಯಾಗುತ್ತದೆ’ ಎಂದು ಹೇಳಿದರು.
‘ಮಹಾರಾಷ್ಟ್ರದ ರಾಹುರಿ ಮಹಾತ್ಮ ಫುಲೆ ಕೃಷಿ ವಿದ್ಯಾಪೀಠ ಸಹ ಮುಧೋಳ ಶ್ವಾನ ತಳಿಗಳನ್ನು ಕೇಳಿದೆ’ ಎಂದು ತಿಳಿಸಿದರು.
‘ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವದಲ್ಲಿ ದೇವಣಿ ತಳಿ ಅಭಿವೃದ್ಧಿ ಮಾಡಲಾಗುತ್ತಿದೆ. ತಳಿಗಳನ್ನು ಬೆಳೆಸಿ ರೈತರಿಗೆ ಕಡಿಮೆಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.