ಬೀದರ್: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯ ಕೊಲೆ ಮಾಡಿದ ಇಬ್ಬರು ಅಪರಾಧಿಗಳಿಗೆ ಇಲ್ಲಿಯ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಪರಾಧಿಗಳಾದ ರಘುನಾಥ ಡಿಗ್ಗಿ ಹಾಗೂ ಸಂತೋಷ ಡಿಗ್ಗಿ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ₹ 60 ಸಾವಿರ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶೆ ಎಚ್.ಆರ್.ರಾಧಾ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ₹ 50 ಸಾವಿರ ಕೊಲೆಗೀಡಾದ ವ್ಯಕ್ತಿಯ ಪತ್ನಿಗೆ ಪರಿಹಾರವಾಗಿ ಕೊಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಭಾಲ್ಕಿ ತಾಲ್ಲೂಕಿನ ಗೊರನಾಳದಲ್ಲಿ 2016ರ ಫೆಬ್ರುವರಿ 13ರಂದು ಗಣಪತಿ ಅಣ್ಣಾರಾವ್ ಬಯಲು ಶೌಚಕ್ಕೆ ಹೋದಾಗ ಭಾನಾಮತಿ ಮಾಡಲು ಬಂದಿರುವೆಯಾ ಎಂದು ರಘುನಾಥ ಡಿಗ್ಗಿ ಹಾಗೂ ಸಂತೋಷ ಡಿಗ್ಗಿ ಅವರ ಮೇಲೆ ದಾಳಿ ಮಾಡಿ ಕೊಡಲಿಯಿಂದ ಹೊಡೆದು ಮುಖದ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದರು.
ಗ್ರಾಮೀಣ ಸಿಪಿಐ ಎನ್.ವಿ.ಮಠಪತಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನಿವೃತ್ತ ಅಭಿಯೋಜಕ ಭೀಮಾಶಂಕರ ಅಂಬಲಗಿ ಸಾಕ್ಷಿಗಳ ವಿಚಾರಣೆ ಮಾಡಿದ್ದರು. ಅಭಿಯೋಜಕ ಶರಣಗೌಡ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.