ಬೀದರ್:‘ಸಂಗೀತ ಮತ್ತು ಸಾಂಸ್ಕೃತಿಕ ವಿದ್ಯೆಯಿಂದ ವ್ಯಕ್ತಿತ್ವ ವಿಕಸನವಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ಸವಿಗಾನ ಸಂಗೀತ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಸವಿಗಾನ ಸಂಗೀತ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಈ ಒತ್ತಡದ ನಿವಾರಣೆಗೆ ಸಂಗೀತ ಅವಶ್ಯಕವಾಗಿದೆ. ಇದರಿಂದ ಮಾನಸಿಕ ನೆಮ್ಮದಿ ಪಡೆದುಕೊಳ್ಳಬಹುದು’ ಎಂದು ಹೇಳಿದರು.
ಮ್ಯಾಥ್ಯೂ ಸುರಾನಿ ಮಾತನಾಡಿ,‘ ಜಿಲ್ಲೆಯಲ್ಲಿ ನಿರಂತರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಮಾಡುತ್ತಿರುವುದು ಬಹಳ ಸಂತಸದ ಸಂಗತಿಯಾಗಿದೆ’ ಎಂದು ನುಡಿದರು.
ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ,‘ ಸಂಗೀತಕ್ಕೆ ತನ್ನದೇ ಆದ ಶಕ್ತಿ ಇದೆ. ಮನುಷ್ಯನ ವಿಕಾರ ಗುಣಗಳನ್ನು ಅಳಿಸಿ ಸದ್ಗುಣಗಳನ್ನು ಬೆಳೆಸುವಲ್ಲಿ ಸಂಗೀತದ ಪಾತ್ರ ಮಹತ್ವದ್ದಾಗಿದೆ’ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ನಿಂಗರಾಜ್ ಅರಸ್ ಹಾಗೂ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಗಾಯನ ನಡೆಸಿಕೊಟ್ಟರು.
ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್, ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಇದ್ದರು. ಭಾನುಪ್ರಿಯಾ ಅರಳಿ ಅಧ್ಯಕ್ಷತೆ ವಹಿಸಿದ್ದರು.
ಸಂಗೀತ ಸಂಜೆ: ಅಕಾಡೆಮಿಯ ಭಾಗ್ಯಲಕ್ಷ್ಮಿ ಗುರುಮೂರ್ತಿ, ಶೈಲಜಾ ದಿವಾಕರ, ರೇಣುಕಾ, ರಮ್ಯ, ಯುಕ್ತಿ, ಮಹಾದೇವಿ ಅವರಿಂದ ಭಕ್ತಿಗೀತೆ, ಶಾಸ್ತ್ರೀಯ ಸಂಗೀತ, ತತ್ವಪದ, ರಂಗಗೀತೆ, ಭಾವಗೀತೆ, ದೇಶ ಭಕ್ತಿಗೀತೆ, ವಚನಗಾಯನ ಮತ್ತು ಜಾನಪದ ಗೀತೆಗಳನ್ನು ಹಾಡಿದರು. ಪ್ರವೀಣ, ಅನಂತಕುಮಾರ ಮತ್ತು ಜೆಸ್ಸಿ ಅವರು ವಾದ್ಯ ನುಡಿಸಿದರು.
ಯದಲಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ನೃತ್ಯ ಸಭಿಕರ ಮನರಂಜಿಸಿತ್ತು.
ಪುಟಾಣಿ ಯುಕ್ತಿ ಅರಳಿ ಪ್ರಾರ್ಥನೆ ಗೀತೆ ಹಾಡಿದರು. ಸಂಜೀವಕುಮಾರ ಅತಿವಾಳೆ ಸ್ವಾಗತಿಸಿದರು. ಪ್ರತಿಭಾ ಚಾಮಾ ಮತ್ತುಬಸವರಾಜ ಮೂಲಗೆ ನಿರೂಪಿಸಿದರು. ಶೈಲಜಾ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.