ಬೀದರ್: ಇಲ್ಲಿಯ ಓಲ್ಡ್ ಸಿಟಿಯಲ್ಲಿರುವ ಕರ್ನಾಟಕ ಛಾಲಿಯಾ ಸ್ಟೋರ್ ಮಾಲೀಕ ಎಂ.ಡಿ. ಅಯಾಜ್ ಉಲ್ ಹಕ್ ಅವರು ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ರಾಮ ಮಂದಿರಕ್ಕೆ ₹ 51 ಸಾವಿರ ದೇಣಿಗೆ ನೀಡಿದ್ದಾರೆ.
ಸಂಸದ ಭಗವಂತ ಖೂಬಾ ಅವರಿಗೆ ನಗರದಲ್ಲಿ ಗುರುವಾರ ದೇಣಿಗೆಯ ಚೆಕ್ ಹಸ್ತಾಂತರಿಸಿದರು.
ಹಕ್ ಅವರು ರಾಮ ಮಂದಿರಕ್ಕೆ ದೇಣಿಗೆ ಕೊಟ್ಟು ರಾಮ- ರಹೀಂ ಒಂದೇ ಎನ್ನುವುದನ್ನು ಮತ್ತೊಮ್ಮೆ ನೆನಪಿಸಿದ್ದಾರೆ ಎಂದು ಭಗವಂತ ಖೂಬಾ ಹೇಳಿದರು.
ನಮ್ಮ ಪೂರ್ವಜರು ಯಾವುದೇ ಜಾತಿ ಭೇದ ಮಾಡದೆ ಹೋರಾಟ, ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. 70 ವರ್ಷಗಳಿಂದ ರಾಜಕೀಯ ಪಕ್ಷವೊಂದು ವೋಟ್ ಬ್ಯಾಂಕ್ಗಾಗಿ ಅನಗತ್ಯ ವಿಷಯಗಳನ್ನು ಚರ್ಚೆಗೆ ತಂದು, ಕೆಲ ಮುಖಂಡರನ್ನು ಬಳಸಿಕೊಂಡು ಹಿಂದೂ, ಮುಸ್ಲಿಂ ಹಾಗೂ ಇತರ ಕೋಮುಗಳ ಜನರಲ್ಲಿ ಭೇದ ಭಾವ ಸೃಷ್ಟಿಸಿ, ಎಲ್ಲ ಜಾತಿ, ಧರ್ಮಗಳ ಅಭಿವೃದ್ಧಿ ಮಾಡದೆ ಅಂತರ ಹೆಚ್ಚಿಸಿದೆ ಎಂದು ಟೀಕಿಸಿದರು.
ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮರಳಾಗದೆ, ಸತ್ಯ ಅರಿತು ಎಲ್ಲ ಜಾತಿ, ಧರ್ಮದವರು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬೇಕು. ನಮ್ಮಲ್ಲಿ ಸೃಷ್ಟಿಯಾಗಿರುವ ಅಂತರವನ್ನು ದೂರ ಮಾಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮದವರು ರಾಮ ಮಂದಿರಕ್ಕೆ ಕೈಲಾದಷ್ಟು ದೇಣಿಗೆ ನೀಡಬೇಕು. ದೇಶದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದೇವೆ ಎನ್ನುವುದನ್ನು ವಿಶ್ವಕ್ಕೆ ತೋರಿಸಬೇಕು ಎಂದು ಹೇಳಿದರು.
ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್, ಸೂರ್ಯಕಾಂತ ಶೆಟಕಾರ್ ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.