ಬಸವಕಲ್ಯಾಣ: ‘ಈ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನೊಂದಿಗೆ ನನ್ನ ಸ್ಪರ್ಧೆ ಇದ್ದು ಬಿಜೆಪಿ ಅಭ್ಯರ್ಥಿ ಲೆಕ್ಕಕ್ಕಿಲ್ಲ’ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಎರಡು ಸಲ ಶಾಸಕನಾಗಿದ್ದೇನೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಲೆಂದು ಬಿಜೆಪಿ ಸೇರ್ಪಡೆ ಆಗಿದ್ದೇನೆ. ಕಳೆದ ಸಲ ಬಿಜೆಪಿಯಿಂದಲೇ ಸೋತೆ. ಆದರೂ, ಈ ಸಲ ನನಗೆ ಟಿಕೆಟ್ ನೀಡಲಿಲ್ಲ’ ಎಂದರು.
‘ಕ್ಷೇತ್ರದ ಹೊರಗಿನವರಿಗೆ ಕಣಕ್ಕೆ ಇಳಿಸಿದ್ದರಿಂದ ಆ ಪಕ್ಷದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸ್ಥಳೀಯ ಸ್ವಾಭಿಮಾನಿ ಬಳಗದಿಂದ ನನಗೆ ಬೆಂಬಲ ದೊರಕುತ್ತಿದೆ. ಅಲ್ಲದೇ, ಎಲ್ಲ ಸಮುದಾಯಗಳ ಮತದಾರರು ನನ್ನನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಕೆಲ ದಿನಗಳಲ್ಲಿಯೇ ಕ್ಷೇತ್ರದ ಚಿತ್ರಣ ಬದಲಾಗಿದ್ದು, ಬಿಜೆಪಿಯವರಿಗೆ ಇದು ನುಂಗಲಾರದ ತುತ್ತಾಗಿದೆ’ ಎಂದರು.
‘ಗ್ರಾಮೀಣ ಭಾಗದಲ್ಲಿ ಒಂದು ಸುತ್ತಿನ ಪ್ರಚಾರ ನಡೆಸಿದ್ದು ಈಗ ನನಗೆ ದೊರೆತ ಚುನಾವಣಾ ಚಿಹ್ನೆ ನೇಗಿಲು (ಟಿಲ್ಲರ್) ನೊಂದಿಗೆ ಪ್ರಚಾರ ನಡೆಸಲಿದ್ದೇನೆ. ನನಗೆ ಓಟು ನೀಡುವ ಭರವಸೆಯ ಜತೆಗೆ ಜನರು ಖರ್ಚಿಗೆ ನೋಟು ಕೂಡ ಕೊಟ್ಟು ಪ್ರೋತ್ಸಾಹಿಸು ತ್ತಿದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.