ಬೀದರ್: ‘ನನ್ನ ಜೀವನದ ಉಸಿರು ಹಾಗೂ ರಕ್ತ ಬಸವ ತತ್ವಕ್ಕೆ ಸಮರ್ಪಿತವಾಗಿದೆ. ಕೊನೆಯ ಉಸಿರಿನವರೆಗೆ ಬಸವ ತತ್ವ ಪ್ರಸಾರದ ಸೇವೆ ಗೈಯುವೆ’ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹೇಳಿದರು.
ಆರು ತಿಂಗಳ ನಂತರ ಗುಣಮುಖರಾಗಿ ನಗರಕ್ಕೆ ಬಂದ ಅವರಿಗೆ ಅಕ್ಕನ ಅರಿವಿನ ಬಳಗದ ವತಿಯಿಂದ ನಗರದ ಸ್ವಾಮಿ ಸಮರ್ಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಗುರುದರ್ಶನ ಸಮಾರಂಭದಲ್ಲಿ ಭಕ್ತರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಜೀವನದಲ್ಲಿ ಬರುವ ಕಷ್ಟಗಳೆಲ್ಲವೂ ಮಾನವನಿಂದ ಮಹಾದೇವನಡೆಗೆ ಒಯ್ಯುವ ದೇವನ ಪರೀಕ್ಷೆಗಳಾಗಿವೆ. ಈ ರೋಗವೆಂಬ ಯುದ್ಧವನ್ನು ಗೆದ್ದು ಬರಲು ಗುರುಬಸವಣ್ಣನವರ ಕರುಣೆ, ಸರ್ವ ಸ್ವಾಮೀಜಿಗಳ ಶುಭ ಹಾರೈಕೆ ಮತ್ತು ಶರಣ ಬಳಗದ ಪ್ರಾರ್ಥನೆಗಳು ಕಾರಣವಾಗಿವೆ’ ಎಂದು ಕೃತಜ್ಞತೆ ಹೇಳಿದರು.
‘ಕರ್ಮವನ್ನು ಗುರು ಕಾರುಣ್ಯದಿಂದ ಗೆಲ್ಲಬಹುದು. ಮೊದಲಿನಿಂದಲು ಗುರುಶಕ್ತಿ ಮತ್ತು ದೇವಶಕ್ತಿಗಳು ಜತೆಗಿವೆ ಎಂಬ ಆತ್ಮವಿಶ್ವಾಸ ನನಗಿತ್ತು’ ಎಂದು ತಿಳಿಸಿದರು.
ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಪ್ರಭುಶ್ರೀ ತಾಯಿ ಹಾಗೂ ಪ್ರಭುದೇವರು ಮಾತನಾಡಿದರು.
ಬಸವಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಬಿ.ಜಿ.ಶೆಟಗಾರ, ಶಕುಂತಲಾ ಬೆಲ್ದಾಳೆ ಸೇರಿದಂತೆ ಪ್ರಮುಖರು ಇದ್ದರು. ಕಲಬುರ್ಗಿ, ಜೇವರ್ಗಿ, ಚಿಂಚೋಳಿ, ಹುಮನಾಬಾದ್, ಜಹೀರಾಬಾದ್ನ ಭಕ್ತರು ಪಾಲ್ಗೊಂಡಿದ್ದರು.
ರಮೇಶ ಮಠಪತಿಯವರು ಮಾತನಾಡಿದರು. ಮಾಣಿಕಪ್ಪ ಗೊರನಾಳೆ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.