ಬೀದರ್: ‘ದೇಶಕ್ಕೆ ಬಿಜೆಪಿ ಕೊಡುಗೆ ಏನೂ ಇಲ್ಲ. ಪಾಕಿಸ್ತಾನದ ಹೆಸರು ಉಲ್ಲೇಖಿಸಿ ಮತ ಕೇಳುವಂತಹ ಹೀನಾಯ ಸ್ಥಿತಿ ಆ ಪಕ್ಷಕ್ಕೆ ಬಂದಿದೆ’ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಟೀಕಿಸಿದರು.
‘ದೇಶದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ. ಜನ ಯಾವಾಗ ಏನಾಗುತ್ತದೋ ಎನ್ನುವ ಆತಂಕದಲ್ಲಿ ಇದ್ದಾರೆ’ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಬಿಜೆಪಿ ಐದು ವರ್ಷಗಳ ಅವಧಿಯಲ್ಲಿ ದೇಶಕ್ಕೆ ಮಾರಕವಾಗುವಂತಹ ಯೋಜನೆಗಳನ್ನು ನೀಡಿದೆಯೇ ಹೊರತು ಜನಸಾಮಾನ್ಯರ ಬದುಕಿಗೆ ನೆರವಾಗುವಂತಹ ಯೋಜನೆಗಳನ್ನಲ್ಲ’ ಎಂದು ದೂರಿದರು.
‘ಅಧಿಕ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ್ದರಿಂದ ತಮ್ಮದೇ ಹಣ ಪಡೆದುಕೊಳ್ಳಲು ಸರದಿ ಸಾಲಿನಲ್ಲಿ ನಿಂತು ನೂರಾರು ಜನ ಪ್ರಾಣ ಕಳೆದುಕೊಳ್ಳಬೇಕಾಯಿತು. ಅದರಿಂದ ಕಪ್ಪು ಹಣವೂ ಪತ್ತೆ ಆಗಲಿಲ್ಲ. ಆದರೆ, ಶ್ರೀಮಂತರ ಕಪ್ಪು ಹಣ ಬಿಳುಪಾಯಿತು’ ಎಂದು ಆಪಾದಿಸಿದರು.
‘ಬಿಜೆಪಿ ಆಡಳಿತ ವೈಖರಿಗೆ ಬೇಸತ್ತು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಹಾಗೂ ನೀತಿ ಆಯೋಗದ ಅಧ್ಯಕ್ಷರು ರಾಜೀನಾಮೆ ನೀಡಿದರು. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆಯಿತು’ ಎಂದು ಆರೋಪಿಸಿದರು.
‘ಬಿಜೆಪಿ ಪ್ರಣಾಳಿಕೆಯಲ್ಲಿ ಜನಸಾಮಾನ್ಯರ ಬದುಕು ಹಸನಾಗಿಸುವ ಕಾರ್ಯಕ್ರಮಗಳು ಇಲ್ಲ. ಕೇವಲ ಭಾವನಾತ್ಮಕ ವಿಷಯಗಳೇ ಇವೆ. ಮತದಾರರು ಭಾವನಾತ್ಮಕವಾಗಿ ಮತ ಚಲಾಯಿಸಬಾರದು. ಮತ ಚಲಾಯಿಸುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮತದಾರರು ಚಲಾಯಿಸುವ ಮತವು ದೇಶವನ್ನು ಅಭಿವೃದ್ಧಿಯತ್ತ ಒಯ್ಯುವ ಹಾಗೂ ಸಂವಿಧಾನವನ್ನು ರಕ್ಷಿಸುವ ಮತ ಆಗಬೇಕು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.