ಬೀದರ್: ಇಲ್ಲಿಯ ಶಹಾಪುರ ಗೇಟ್ ಸಮೀಪದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮೇಲೆ ಬೆಳಕು ಚೆಲ್ಲಿತು.
ಮೊದಲ ದಿನ ಖ್ಯಾತ ಶಿಕ್ಷಣ ತಜ್ಞ ಸೈಯದ್ ಮಹಮ್ಮದ್ ಬ್ಯಾರಿ ಸಮ್ಮೇಳನಕ್ಕೆ ಚಾಲನೆ ನೀಡಿದರು. ಎರಡು ದಿನಗಳ ಸಮ್ಮೇಳನದಲ್ಲಿ ಸದ್ಯದ ಶಿಕ್ಷಣ ನೀತಿಗೆ ಹೋಲಿಸಿದ್ದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಗಿರುವ ಬದಲಾವಣೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ. ಎಲ್ಲ ವರ್ಗದವರಿಗೂ ಅನುಕೂಲಕರವಾಗಿದೆ ಎಂದು ಪ್ರತಿಪಾದಿಸಿದರು.
ಆಜಂಗಡದ ಮೌಲಾನಾ ತಾಹೀರ್ ಮದಾನಿ, ಬೆಂಗಳೂರಿನ ಮೌಲಾನಾ ಮಕ್ಸೂದ್ ಇಮ್ರಾನ್ ರಶೀದ್, ಸಹಾರನಪುರದ ಮೌಲಾನಾ ಹಬಿಬುದ್ದಿನ್ ಮದಾನಿ, ಬರೆಲಿಯ ಮೌಲಾನಾ ಇಷಾನ್ ಉಲ್ ಹಕ್ ಚತುರ್ವೇದಿ, ಮೌಲಾನಾ ಅಬ್ದುಲ್ ರಶೀದ್ ಮಿಫತಾಹಿ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ನಿರ್ದೇಶಕಿ ಮೆಹರ್ ಸುಲ್ತಾನಾ, ಕಾರ್ಪೊರೇಟ್ ಟ್ರೇನರ್ ಅತಿಕ್ ಉರ್ ರಹಮಾನ್, ತನ್ವೀರ್ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಎರಡನೇ ದಿನ ಅಶ್ಫಾಕ್ ಅಹಮ್ಮದ್, ಮೌಲಾನಾ ಯುಸೂಫ್ ನದ್ವಿ, ಮೌಲಾನಾ ಅಕ್ರಂ ನದ್ವಿ, ಮೌಲಾನಾ ಮುಸ್ತಫಾ ನದ್ವಿ, ಮುಫ್ತಿ ಅಬ್ದುಲ್ ಮಜಿದ್, ಮಹಫೂಜ್ ಝರಿವಾಲಾ, ಅಫ್ಜಲ್ ಷರೀಫ್, ಅಬ್ದುಲ್ ಹೈ, ಸೈಯದ್ ತನ್ವೀರ್ ಅಹಮ್ಮದ್, ಮೌಲಾನಾ ವಲಿಯುಲ್ಲಾ ಸಯೀದಿ, ಮೌಲಾನಾ ಝೈನ್ ಉಲ್ ಅಬಿದೀನ್ ವಿಷಯ ಮಂಡನೆ ಮಾಡಿದರು. ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್ ಸಮಾರೋಪ ಭಾಷಣ ಮಾಡಿದರು. ದೇಶದ 200 ಶಾಲಾ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.